![](https://www.chandravallinews.com/wp-content/uploads/2024/06/WhatsApp-Image-2024-06-27-at-6.22.22-PM-1-1024x515.jpeg)
i
ಬೆಂಗಳೂರು ವಿಶ್ವ ಮನ್ನಣೆ ಗಳಿಸಲು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಇಂದಿನ ಬೆಂಗಳೂರು ನಗರವು ಉದ್ಯಾನ ನಗರಿ, ಸ್ವಚ್ಛನಗರಿ, ಸಿಲಿಕಾನ್ ಸಿಟಿ, ಕೂಲ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ವಿಶ್ವಮನ್ನಣೆ ಪಡೆಯಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಹುತ್ರಿದುರ್ಗ, ದೇವರಾಯನ ದುರ್ಗ ಸೇರಿ ರಾಜ್ಯದ ೧೬ ಪ್ರದೇಶಗಳಲ್ಲಿ ದುರ್ಗಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಜನರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಕೆಂಪೇಗೌಡರು ಉತ್ತಮ ಆಡಳಿತಗಾರರಾಗಿದ್ದರು. ಯಲಹಂಕ ಗ್ರಾಮದಲ್ಲಿದ್ದ ತಮ್ಮ ಆಡಳಿತವನ್ನು ೧೫೪೦ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಿ ಹಲವಾರು ಅಭಿವೃದ್ದಿ ಕಾರ್ಯಗಳ ಮೂಲಕ ಬೆಂಗಳೂರು ನಗರವನ್ನು ಅತೀ ಎತ್ತರಕ್ಕೆ ಕೊಂಡೊಯ್ದರು. ದೇಶ ಸುತ್ತು ಕೋಶ ಓದು ಎನ್ನುವ ನಾಣ್ನುಡಿಯಂತೆ ದೇಶ-ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ರಾಜನೀತಿಯನ್ನು ಆಳವಾಗಿ ಅಧ್ಯಯನ ಮಾಡಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು. ತಮ್ಮ ತಂದೆಯಿಂದ ಉತ್ತಮ ಆಡಳಿತ ರೀತಿ-ನೀತಿಯನ್ನು ಬಳುವಳಿಯಾಗಿ ಪಡೆದಿದ್ದ ಕೆಂಪೇಗೌಡರು ಸತ್ಯ, ಧರ್ಮದ ಆಧಾರದಲ್ಲಿ ಆಡಳಿತ ನಡೆಸಿ ನಾಡಪ್ರಭು ಎನಿಸಿಕೊಂಡರು. ಇವರ ಆದರ್ಶ, ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸರ್ಕಾರದಿಂದ ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ೧೫೧೦ರಲ್ಲಿ ಜನಿಸಿದ ಕೆಂಪೇಗೌಡರಿಗೆ ೧೫೨೮ರಲ್ಲಿ ಪಟ್ಟಾಭಿಷೇಕ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುವ ಮೂಲಕ ಬೆಂಗಳೂರನ್ನು ವಿಶ್ವವೇ ಹಾಡಿ ಹೊಗಳುವಂತೆ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.ವಿದ್ಯಾರ್ಥಿಗಳು, ಯುವ ಜನಾಂಗ ಇವರ ಸಾಧನೆಯ ಸೂತ್ರಗಳನ್ನು ಹಾಗೂ ನಾಡಿನ ಅಭಿವೃದ್ಧಿಗೆ ನೀಡಿರುವ ಅದ್ವಿತೀಯ ಕೊಡುಗೆಗಳನ್ನು ತಿಳಿದುಕೊಂಡು ಅವರ ಮೌಲ್ಯಯುತ ಗುಣವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದೇಶದ ೪ನೇ ಅತಿ ದೊಡ್ಡ ನಗರವೆಂದು ಗುರುತಿಸಿಕೊಂಡಿರುವ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ರಾಜ್ಯಕ್ಕೆ ಶೇ.೮೦ರಷ್ಟು ರಾಜಸ್ವ ನೇರವಾಗಿ ಬರುತ್ತಿದೆ. ಇಡೀ ರಾಜ್ಯ ಅಭಿವೃದ್ಧಿಗೆ ಈ ರಾಜಸ್ವವನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಜನರ ಬದುಕಿಗೆ ಆರ್ಥಿಕ ಶಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಅಕ್ಕಿಪೇಟೆ, ರಾಗಿಪೇಟೆ, ಮಂಡಿಪೇಟೆ, ಬಳೆಪೇಟೆ ಸೇರಿದಂತೆ ಮತ್ತಿತರ ಪೇಟೆಗಳನ್ನು ನಿರ್ಮಿಸಿದ್ದಾರೆ. ಈ ಪೇಟೆಗಳು ಇಂದಿಗೂ ರಾಜಧಾನಿಯಲ್ಲಿ ಎಲ್ಲಾ ವರ್ಗದ ಶಾಪಿಂಗ್ ಕೇಂದ್ರವಾಗಿರುವುದು ನಾವಿಲ್ಲಿ ಸ್ಮರಿಸಬಹುದು ಎಂದು ತಿಳಿಸಿದರು. ಬೆಂಗಳೂರಿಗೆ ಭೇಟಿ ನೀಡುವ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಏನೋ ಹೊಸ ಸಂಚಲನ ಮೂಡಿದ ಹಾಗೆ, ಮೈ-ರೋಮಾಂಚನವಾಗುವ ಅನುಭವವಾಗುತ್ತದೆ. ಇಂದಿನ ಯುವ ಪೀಳಿಗೆಯು ಕೆಂಪೇಗೌಡರ ನಗರ ನಿರ್ಮಾಣದ ಪರಿಕಲ್ಪನೆ, ನಿಸ್ವಾರ್ಥ ಸೇವೆ, ಕನ್ನಡ ಭಾಷೆ-ಸಂಸ್ಕೃತಿಯ ಮೇಲಿನ ಕಾಳಜಿಯ ಪರಂಪರೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೆಂಪೇಗೌಡರ ಅದ್ವಿತೀಯ ಸಾಧನೆಗಳು ಇಂದಿಗೂ ಯುವ ಪೀಳಿಗೆಗೆ ಆಶಾಕಿರಣವಾಗಿವೆ. ಗ್ರಾಮ ನಿಮಾಣ ಮಾಡುವುದೇ ಕಷ್ಟಸಾಧ್ಯವಾಗಿರುವಾಗ ಬೆಂಗಳೂರಿನಂತಹ ಮಹಾನಗರದ ಸೃಷ್ಟಿಗೆ ಕಾರಣಕರ್ತರಾದ ಕೆಂಪೇಗೌಡರ ಯೋಜನೆಗಳು ಸದಾ ಸ್ಮರಿಸುವಂತಹದು. ಕೆಂಪೇಗೌಡರು ಸುಮಾರು ೪೫೦ ವರ್ಷಗಳ ಹಿಂದೆಯೇ ಸರ್ವರಿಗೂ ಸಮಾನ ಅವಕಾಶ, ಕುಡಿಯುವ ನೀರು, ಕಲೆ, ವಾಸ್ತು ಶಿಲ್ಪ, ಸಾಂಸ್ಕೃತಿಕ ಆಚರಣೆ, ದೇವಾಲಯ ಸೇರಿದಂತೆ ಹಲವು ರೀತಿಯಲ್ಲಿ ಸಮಾನತೆ ಕಲ್ಪಿಸಿಕೊಟ್ಟಿದ್ದರು ಎಂದು ಮಾರ್ಮಿಕ ನುಡಿಗಳನ್ನಾಡಿದರು. ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು. ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಗೋವಿಂದರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಡಿಡಿಪಿಐ ಕೆ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ, ಲಕ್ಷ್ಮಿರಂಗಯ್ಯ ಸೇರಿದಂತೆ ವಿವಿಧ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಗಣ್ಯರಿಂದ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.