![](https://www.chandravallinews.com/wp-content/uploads/2024/06/Govind-M-Karjol-1571050023-1.jpg)
i
ಸಿಎಂ ಕುರ್ಚಿಗೆ ಕಿತ್ತಾಟ, ಸರ್ಕಾರ ದಿವಾಳಿ-ಸಂಸದ ಕಾರಜೋಳ..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಕುರ್ಚಿಗಾಗಿ ಗುಂಪುಗಳಾಗಿ ಬಡಿದಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು, ನಿಗಮಗಳಲ್ಲಿ ಹಣದ ಅವ್ಯವಹಾರ ಹೆಚ್ಚಾಗಿದೆ. ಸಿಎಂ ಕುರ್ಚಿಗಾಗಿ ಜಾತಿವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ನಮ್ಮ ಜಾತಿಯವರು ಸಿಎಂ ಆಗಬೇಕೆಂದು ಸ್ವಾಮೀಜಿಗಳೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅರ್ಹತೆ ಮತ್ತು ದಕ್ಷತೆ ಇದ್ದ ವ್ಯಕ್ತಿ ಸಿಎಂ ಆಗುವುದು ಅಗತ್ಯವಾಗಿದೆ. ಸಿಎಂ ಕುರ್ಚಿ ಮಾರಾಟದ ವಸ್ತುವಲ್ಲ, ಅದು ಶಾಸಕರಿಂದ ಆಯ್ಕೆಯಾಗುವ ಸ್ಥಾನ. ಇದರ ಬಗ್ಗೆ ಬಹಿರಂಗವಾಗಿ ಮಾತಾಡುವುದು ಸರಿಯಲ್ಲ. ಸಿಎಂ ಕುರ್ಚಿಗಾಗಿ ದಲಿತ ನಾಯಕರು, ಧ್ವನಿ ಎತ್ತಿದರೆ, ಮತ್ತೊಂದು ಕಡೆ ವೀರಶೈವ ಸಮಾಜ ಧ್ವನಿ ಎತ್ತಿದ್ದು, ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಸಿಎಂ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಸತ್ತ ಪ್ರಾಣಿಯಾಗಿದ್ದು, ಅದನ್ನು ಹರಿದು ತಿನ್ನುವ ರಣಹದ್ದುಗಳಾಗಿ ಶಾಸಕರು, ಮಂತ್ರಿಗಳು ಕಚ್ಚಾಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಜನ ಪರ ಆಡಳಿತ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳಿಗೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಅವುಗಳು ಅರ್ಹರಿಗೆ ತಲುಪಬೇಕಿದೆ. ಬಡವರಿಗೆ ಶಿಕ್ಷಣ ಉದ್ಯೋಗ ಮತ್ತು ಆರೋಗ್ಯ ನೀಡುವುದು ಸರ್ಕಾರದ ಕೆಲಸವಾಗಿದೆ ಎಂದರು. ಕರ್ನಾಟಕ ಇಬ್ಭಾಗ ಸಲ್ಲದು: ರಾಜ್ಯವನ್ನು ಇಬ್ಭಾಗ ಮಾಡಬೇಕೆಂದು ಚಂದ್ರಶೇಖರ್ ಹೇಳಿಕೆ ಖಂಡಿಸಿರುವ ಚಿತ್ರದುರ್ಗ ಸಂಸದ ಕಾರಜೋಳ, ಈ ಹಿಂದೆ ಹರಿದು ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಮೂಲಕ ಕರ್ನಾಟಕ ರಾಜ್ಯವನ್ನಾಗಿ ಮಾಡಲಾಗಿದೆ.ಈಗ ಮತ್ತೆ ರಾಜ್ಯ ಇಬ್ಭಾಗ ಮಾಡುವ ಹೇಳಿಕೆ ಸರಿಯಲ್ಲ. ರಾಜ್ಯ ಯಾವಾಗಲೂ ಒಂದೇ ಆಗಿರಬೇಕು, ಒಂದು ಧ್ವಜ ಒಬ್ಬ ಸಿಎಂ ಇರಬೇಕು ಎಂದು ಪೂರ್ಜರು ಹೋರಾಟ ಮಾಡಿದ್ದಾರೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಸಮಯದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅನೇಕರು ಜೈಲು ಸೇರಿದ್ದಾರೆ. ಅವರ ಹೋರಾಟ ಇಂದಿನ ಜನಾಂಗಕ್ಕೆ ಗೊತ್ತಿಲ್ಲ. ಇದನ್ನು ತಿಳಿಯದೆ ರಾಜ್ಯದ ಇಬ್ಭಾಗದ ಮಾತಾಡುತ್ತಿದ್ದಾರೆ. ಇದು ಸರಿಯಲ್ಲ. ಮಾಹಿತಿ ಕೊರತೆಯಿಂದ ಈ ಹೇಳಿಕೆ ಬರುತ್ತಿದೆ. ಯಾವುದೇ ಕಾರಣಕ್ಕೆ ಅಖಂಡ ಕರ್ನಾಟಕ ಒಂದಾಗಿರಬೇಕು. ಯಾರೂ ಕೂಡ ಕರ್ನಾಟಕ ಇಬ್ಭಾಗ ಆಗಬೇಕು ಎಂದು ಧ್ವನಿ ಎತ್ತಬಾರದೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕ ಇತಿಹಾಸವನ್ನು ಓದಬೇಕು. ಈ ದೇಶದ ಸ್ವಾತಂತ್ರ್ಯದ ಬಗ್ಗೆ ಒಂದಾಗಿರುವ ಬಗ್ಗೆ ಇತಿಹಾಸ ತಿಳಿದುಕೊಳ್ಳಬೇಕು. ೧೯೫೬ ರ ನವೆಂಬರ್ ನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಅದು ಮುಂದುವರೆಯಬೇಕು. ಚಿತ್ರದುರ್ಗ ಸೇರಿದಂತೆ ಹೈದ್ರಾಬಾದ್ ಕರ್ನಾಟಕಕ್ಕೆ ಅಭಿವೃದ್ದಿಯಲ್ಲಿ ಮಲತಾಯಿ ಧೋರಣೆಯಿಂದ ಅನ್ಯಾಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಿಲ್ಲ ಎಂದು ಹೇಳಿದರೆ, ಕೆಲವರಿಗೆ ಮೂಗಿನ ಮೇಲೆ ಕೋಪ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎಸ್ಟಿ ನಿಗಮದ ಹಗರಣ: ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡು, ಖಜಾನೆ ಲೂಟಿ ಮಾಡಿದೆ ಎಂದು ಜನರ ಅಭಿಪ್ರಾಯವಾಗಿದೆ. ಖಜಾನೆ ಲೂಟಿ ಮಾಡಿದವರು, ಸಮಾಜದ ಹೊರಗೆ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಅದಕ್ಕೆ ಸರ್ಕಾರದ ಕೈವಾಡ ಇದೆ ಎಂದು ಸ್ಪಷ್ಟವಾಗಿ ರಾಜ್ಯದ ೬.೫ ಕೋಟಿ ಜನರಿಗೆ ಗೊತ್ತಾಗಿದೆ. ಸರ್ಕಾರ ಕೂಡಲೇ ೧೮೭ ಕೋಟಿ ಹಣವನ್ನು ಸರ್ಕಾರದ ಖಜಾನೆಗೆ ತೆಗೆದುಕೊಂಡು ದಲಿತರ ಉದ್ಧಾರಕ್ಕಾಗಿ ವೆಚ್ಚ ಮಾಡಬೇಕು, ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದು ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ಗೋವಿಂದ ತಿಳಿಸಿದರು.