![](https://www.chandravallinews.com/wp-content/uploads/2024/06/WhatsApp-Image-2024-06-30-at-6.56.59-AM-1024x320.jpeg)
i
ಜುಲೈ.೧ ರಂದು ಮದಕರಿ ನಾಯಕರ ಪಟ್ಟಾಭಿಷೇಕ, ಸ್ಮರಣೋತ್ಸವ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಐತಿಹಾಸಿಕ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಆಳಿದ ರಾಜವೀರ ಮದಕರಿನಾಯಕನ ೨೭೦ ನೇ ಪಟ್ಟಾಭಿಷೇಕವನ್ನು ಜು.೧ ರಂದು ವಿಜೃಂಭಣೆಯಿಂದ ಆಚರಿಸಲಾಗುವುದೆಂದು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೧೧ ಕ್ಕೆ ಮದಕರಿನಾಯಕನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು.೧೨ ಗಂಟೆಗೆ ತ.ರಾ.ಸು.ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು, ಶಾಸಕರು, ಸಚಿವರು, ನಾಯಕ ಸಮಾಜದ ಮುಖಂಡರುಗಳು ಆಗಮಿಸಲಿದ್ದಾರೆ. ಎಲ್ಲಾ ಜಾತಿ ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿ.ಕಾಂತರಾಜ್ ಮನವಿ ಮಾಡಿದರು.ಥೀಂ ಪಾರ್ಕ್, ಕೋಟೆ ಅಭಿವೃದ್ದಿ ಬಗ್ಗೆ ಸಚಿವರು, ಶಾಸಕರುಗಳಿಗೆ ಮನವಿ ಸಲ್ಲಿಸಲಾಗುವುದು. ಚಿತ್ರದುರ್ಗಕ್ಕೆ ಮದಕರಿನಾಯಕ ತನ್ನದೆ ಆದ ಕೊಡುಗೆ ಕೊಟ್ಟಿದ್ದಾರೆ. ಅದಕ್ಕೆ ಸೂಕ್ತ ಗೌರವ, ಸ್ಥಾನಮಾನ ಸಿಗುತ್ತಿಲ್ಲ. ಮದಕರಿನಾಯಕನ ಹೆಸರು ಬೆಳೆದರೆ ಊರು ಬೆಳೆದಂತೆ. ಇಲ್ಲಿವರೆಗೂ ಅಧಿಕಾರ ನಡೆಸಿದ ಯಾವ ರಾಜಕಾರಣಿಗಳಿಗೂ ಊರು ಅಭಿವೃದ್ದಿಯಾಗುವುದು ಬೇಕಾಗಿಲ್ಲ. ಹನ್ನೆರಡನೆ ವರ್ಷಕ್ಕೆ ಪಟ್ಟಕ್ಕೇರಿದ ಮದಕರಿನಾಯಕನ ಅನೇಕ ವಿಚಾರಗಳು ಬೆಳಕಿಗೆ ಬರಬೇಕಿದೆ. ಹಾಗಾಗಿ ನಾಯಕ ಜನಾಂಗದಿಂದ ಪಟ್ಟಾಭಿಷೇಕ, ಜಯಂತಿ, ಸ್ಮರಣೋತ್ಸವವನ್ನು ಆಚರಿಸುವುದು ನಮ್ಮ ಧರ್ಮ ಎಂದು ಹೇಳಿದರು.ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಎಲ್ಲಾ ಮಹಾನ್ ನಾಯಕರುಗಳನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಸರ್ವಧರ್ಮದವರು ಮದಕರಿನಾಯಕನ ಪಟ್ಟಾಭಿಷೇಕದಲ್ಲಿ ಭಾಗವಹಿಸಿದರೆ ಒಳ್ಳೆಯದು. ಏಕೆಂದರೆ ಮದಕರಿನಾಯಕ ಕೇವಲ ನಾಯಕ ಜನಾಂಗಕ್ಕೆ ಸೀಮಿತವಲ್ಲ. ಊರಿನ ದೊರೆಗೆ ಗೌರವ ಸಲ್ಲಿಸುವುದು ಎಲ್ಲರ ಜವಾಬ್ದಾರಿ ಎಂದರು.
ನಾಯಕ ಸಮಾಜದ ಮುಖಂಡ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಪಟ್ಟಾಭಿಷೇಕದ ಮೂಲಕ ಮದಕರಿನಾಯಕನ ಇತಿಹಾಸ ಪರಂಪರೆಯನ್ನು ಎಲ್ಲರಿಗೂ ತಿಳಿಸಬೇಕಿದೆ. ಚಿತ್ರದುರ್ಗದ ಕೋಟೆಯನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ವೇದಿಕೆ ಕಾರ್ಯಕ್ರಮದಲ್ಲಿ ಬಿ.ಕಾಂತರಾಜ್ರವರು ಸಚಿವರು ಶಾಸಕರುಗಳಿಗೆ ಮನವಿ ಅರ್ಪಿಸಲಿದ್ದಾರೆಂದು ತಿಳಿಸಿದರು.ಹೆಚ್.ಅಂಜಿನಪ್ಪ, ಕಾಟಿಹಳ್ಳಿ ಕರಿಯಪ್ಪ, ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.