ಜಪಾನ್‌ ಉದ್ಯಮಿಗಳಿಂದ 4 ಸಾವಿರ ಕೋಟಿ ಹೂಡಿಕೆ-ಎಂಬಿ ಪಾಟೀಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ವಾರ ಜಪಾನ್‌ಪ್ರವಾಸ ತಾವು ಕೈಗೊಂಡಿದ್ದು ಆ ದೇಶದ ವಿವಿಧ ಉದ್ಯಮಿಗಳಿಂದ ಸುಮಾರು 4 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಖಾತ್ರಿ ನೀಡಲಾಗಿದೆ ಎಂದು ಬೃಹತ್‌ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಬೆಂಗಳೂರಿನ ನಿವಾಸದಲ್ಲಿ ಸೋಮವಾರ ಮಾತನಾಡಿದ ಅವರು, ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಜಪಾನ್‌ಗೆ ಎರಡನೇ ಭೇಟಿ ನೀಡಿದೆ. ಜಪಾನಿನ ಉದ್ಯಮಗಳ ಪ್ರಮುಖರು ಸಾಂಪ್ರದಾಯಿಕ ಆಲೋಚನೆ ಉಳ್ಳವರಾಗಿದ್ದು, ಸಾಕಷ್ಟು ದೀರ್ಘವಾಗಿ ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ದೇಶದಲ್ಲಿರುವ ಜಪಾನಿ ಉದ್ದಿಮೆಗಳಲ್ಲಿ ಶೇ.50ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಇವೆ. ಹಿಂದೆ ತಾವು ಜಪಾನ್‌ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾಗ 6,500 ಕೋಟಿ ರೂ. ಹೂಡಿಕೆ ಸೆಳೆಯಲಾಗಿತ್ತು ಎಂದು ಪಾಟೀಲ್ ಅವರು ತಿಳಿಸಿದರು.

- Advertisement - 

ಈ ಸಲದ ಭೇಟಿಯಲ್ಲಿ ಹೋಂಡಾ ಸೇರಿದಂತೆ ಇತರೆ ಕಂಪನಿಗಳು ರಾಜ್ಯದಲ್ಲಿ ವಿಸ್ತರಣೆ, ಮುಕುಂದ್‌ಸುಮಿ ಸ್ಟೀಲ್ಸ್‌ಕಂಪನಿ ಜೊತೆ ಸಹಭಾಗಿತ್ವ ಮುಂತಾದ ವಿಚಾರ ಕುರಿತು ಚರ್ಚಿಸಲಾಗಿದೆ ಎಂದರು.

ಅಮೆರಿಕ ಎಲೆಕ್ಟ್ರಾನಿಕ್‌ಮತ್ತು ಫಾರ್ಮಾ ಉತ್ಪನ್ನಗಳನ್ನು ಬಿಟ್ಟು ಭಾರತದ ಉಳಿದ ಉತ್ಪನ್ನಗಳ ಮೇಲೆ ಶೇ.50ರಷ್ಟು ಆಮದು ಸುಂಕ ವಿಧಿಸಿದೆ. ಇದೊಂದು ಬಿಕ್ಕಟ್ಟು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆದರೂ ಈ ಸಲದ ಭೇಟಿಯಲ್ಲಿ 4,000 ಕೋಟಿ ರೂ. ಹರಿದು ಬರಲಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

- Advertisement - 

ಕೆಲ ಕಂಪನಿಗಳು ಕಡಿಮೆ ಬಂಡವಾಳ ಹೂಡಬಹುದು. ಇವೆಲ್ಲವೂ ನಮ್ಮ ಕೈಗಾರಿಕಾ ಕಾರ್ಯ ಪರಿಸರದ ಮೌಲ್ಯವರ್ಧನೆ ಮಾಡುತ್ತವೆ. ಜೊತೆಗೆ, ಉದ್ದಿಮೆದಾರರು ಹೂಡಿಕೆಯ ವಿಚಾರಕ್ಕೆ ಬಂದಾಗ ಶಾಂತಿಯಿಂದ ಕೂಡಿರುವ ವಾತಾವರಣವನ್ನು ಇಷ್ಟಪಡುತ್ತಾರೆ. ಇದನ್ನು ಕೂಡ ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದ ಯಾವ ಭಾಗದಲ್ಲೂ ಬಂಡವಾಳ ಹೂಡಿಕೆಗೆ ಪ್ರತಿಕೂಲ ಎನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಹೇಳಿದರು.

2ನೇ ಏರ್ಪೋರ್ಟ್‌ಸ್ಥಳ ಅಖೈರಿಗೆ ಮನವಿ:
ರಾಜ್ಯದಲ್ಲಿ ನಿರ್ಮಾಣ ಉದ್ದೇಶಿಸಿರುವ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ಅಖೈರುಗೊಳಿಸುವಂತೆ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ನಾಯ್ಡು ಅವರಿಗೆ ಮನವಿ ಸಲ್ಲಿಸಿದ್ದರು.

ಇದರ ಜೊತೆಗೆ ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದೂ ಸೇರಿದಂತೆ ಕರ್ನಾಟಕದ ವೈಮಾನಿಕ ವಲಯದ ಹಲವು ಬೇಡಿಕೆಗಳೊಂದಿಗೆ ಮನವಿ ಸಲ್ಲಿಸಿ, ವಿಸ್ತೃತ ಮಾತುಕತೆ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.

 

 

Share This Article
error: Content is protected !!
";