ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯನವರೇ, ನಿಮ್ಮ ಸಮುದಾಯಕ್ಕೆ ತಾವು ಮಾಡಿರುವ ಪ್ರವಚನಕ್ಕೆ ಧನ್ಯವಾದ. ಅದು ಖಂಡಿತ ತಪ್ಪಲ್ಲ.
ಅದೇ ಪ್ರವಚನ ಇತರೆ ಸಮುದಾಯಗಳಿಗೂ ಅಗತ್ಯವಿದೆ. ದಯವಿಟ್ಟು ಮಾಡಿ. ತಾವು ಒಂದು ಸಮುದಾಯಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಮತ್ತು ಆರೂವರೆ ಕೋಟಿ ಕನ್ನಡಿಗರಿಗೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಎಲ್ಲಾ ಜಾತಿಗಳಲ್ಲಿಯೂ ಒಳ ಪಂಗಡಗಳಿವೆ. ಎಲ್ಲೆಡೆಯೂ, ಎಲ್ಲರಿಗೂ ನಿಮ್ಮ ಪ್ರವಚನ ಅಗತ್ಯ. ಒಳಪಂಗಡ ಬಿಟ್ಟು ಜಾತಿಯನ್ನಷ್ಟೇ ನಮೂದಿಸಿ ಎಂದು ತಾವು ಒಂದು ಸುದೀರ್ಘ ಮಾಧ್ಯಮ ಹೇಳಿಕೆ ನೀಡಿ. ಏಕೆಂದರೆ, ಒಂದು ಸಮುದಾಯಕ್ಕೆ ಬೆಣ್ಣೆ, ಇನ್ನೊಂದು ಸಮುದಾಯಕ್ಕೆ ಸುಣ್ಣ ಎನ್ನುವಂತೆ ಆಗಬಾರದು.
ಸಮೀಕ್ಷೆ ಸಾಚಾತನದ ಬಗ್ಗೆ ಶಂಕೆ ಇದೆ. ಏಕೆಂದರೆ, ಜಾತಿ ಜಾತಿಗಳ ನಡುವೆ ವಿಷ ಬಿತ್ತುತ್ತಿರುವ ನೀವು, 300ಕ್ಕೂ ಹೆಚ್ಚು ಹೊಸ ಜಾತಿಗಳನ್ನು ಸೃಷ್ಟಿಸಿದ್ದೀರಿ! ಈ ಸುಳ್ಳು ಸೃಷ್ಟಿ ಏಕೆ?
ಜಾತಿಗಣತಿ ಸಮೀಕ್ಷೆ 2025ರ ಭಾಗ-1ರ ಕಾಲಂ -10ರಲ್ಲಿ ಉಪಜಾತಿ ಸೇರಿಸುವ ಆವಶ್ಯಕತೆ ಏನಿತ್ತು? ದಯಮಾಡಿ ಹೇಳಿ, ನಿಮ್ಮ ಪ್ರವಚನದ ಅಗತ್ಯ ಇದೆ ಎಂದು ಜೆಡಿಎಸ್ ತಿಳಿಸಿದೆ.

