ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಂಧೀಜಿಯವರ ಮಹಾನ್ ಸ್ವರೂಪ ನಮ್ಮ ದೇಶಕ್ಕೆ ಬೆಳಕಾಗಿದೆ. ನಾವೆಲ್ಲರೂ ಗಾಂಧೀಜಿಯವರನ್ನು ಸ್ಮರಿಸೋಣ, ಅವರ ಆಶಯಗಳನ್ನು ಉಳಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಪವಿತ್ರ ದಿನ. ಇದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜನ್ಮ ದಿನಾಚರಣೆ ಮತ್ತು ವಿಜಯದಶಮಿಯ ಶುಭ ದಿನ ಕೂಡ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಜನ್ಮದಿನ. ದುರ್ಗೆ ಎಂದರೆ ಶಕ್ತಿ, ಗಾಂಧಿ ಎಂದರೆ ಶಾಂತಿ. ಎಲ್ಲರಿಗೂ ಶಕ್ತಿ ಮತ್ತು ಶಾಂತಿ ಸಿಗಲಿ ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಾರ್ಥಿಸುವುದಾಗಿ ಡಿಸಿಎಂ ಶಿವಕುಮಾರ್ ತಿಳಿಸಿದರು.
ನಮ್ಮ ದೇಶದ ಯುವಕರಿಗೆ, ವಿದ್ಯಾರ್ಥಿಗಳಿಗೆ, ಜನತೆಗೆ ಗಾಂಧೀಜಿಯವರ ತತ್ವ, ಆದರ್ಶಗಳು ಹಾಗೂ ಗಾಂಧೀಜಿಯವರಿಂದ ಈ ದೇಶಕ್ಕೆ ಏನು ಉಪಯೋಗವಾಯಿತು ಎಂಬುದರ ಬಗ್ಗೆ ತಿಳಿಸಲು, ಮತ್ತು ಇವೆಲ್ಲವನ್ನೂ ಕೇವಲ ಪುಸ್ತಕದಲ್ಲಿ ಓದುವುದಲ್ಲದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಎಂದು ಅವರಿಗೆ ಅರಿವು ಮೂಡಿಸಲು, ಗಾಂಧೀಜಿಯವರು ಕಾಂಗ್ರೆಸ್ಅಧ್ಯಕ್ಷತೆ ವಹಿಸಿದ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಮ್ಮ ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ‘ಗಾಂಧಿ ಜ್ಯೋತಿ‘ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೆ ಕಳುಹಿಸಬೇಕೆಂದು ಯೋಜನೆ ರೂಪಿಸಿದ್ದೇವೆ.
ಮಾಜಿ ಪ್ರಧಾನಿ ಲಾಲ್ಬಹದ್ದೂರ್ಶಾಸ್ತ್ರಿಯವರ ಜನ್ಮ ದಿನ ಸಹ ಇದ್ದು, ಅವರು ಒಬ್ಬ ಧೀಮಂತ ನಾಯಕರು, ಅವರ ಸರಳತೆ ನಮಗೆ ಎಂದೆಂದಿಗೂ ಸ್ಫೂರ್ತಿ ಎಂದು ಡಿಸಿಎಂ ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ನೂರು ವರ್ಷದ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ರೆಸಲ್ಯೂಷನ್ ಮಾಡಿದ ಸಭೆ ಮತ್ತು ನಾವು ಈಗ ನಡೆಸಿದ ಸಭೆ, ಇವೆರಡನ್ನೂ ಸೇರಿಸಿ ನನ್ನ ಅನುಭವದ ಬಗ್ಗೆ ನಾನು ಒಂದು ಪುಸ್ತಕವನ್ನು ಸಹ ಬರೆದಿದ್ದೇನೆ. ಅದನ್ನು ಸಹ ಬಿಡುಗೊಡೆಗೊಳಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

