ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಮಾಡುತ್ತಿರುವ ಜಾತಿ ಗಣತಿ ಸಮೀಕ್ಷೆ ಅಕ್ಟೋಬರ್-7 ರಂದು ಕೊನೆಯ ದಿನವಾಗಿದ್ದು ಸಮೀಕ್ಷೆ ಕಾರ್ಯ ಪೂರ್ಣವಾಗಿಲ್ಲದಿರುವುದರಿಂದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಅವಧಿ ವಿಸ್ತರಣೆ ಬಗ್ಗೆ ಸುಳಿವು ನೀಡಿದ್ದಾರೆ.
ಕೊಪ್ಪಳದಿಂದ ಮುಖ್ಯಮಂತ್ರಿಗಳು ಮರಳಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಸಮೀಕ್ಷೆಯ ಪ್ರಗತಿ ಶೇ 70-80 ರಷ್ಟಾಗಿದೆ. ತಾಂತ್ರಿಕ ಹಾಗೂ ಗಣತಿದಾರರ ಗೊಂದಲಗಳಿಂದ ಸ್ವಲ್ಪ ವಿಳಂಬ ಆಗುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಜಾತಿ ಗಣತಿ ಕುರಿತು ವಿವಿಧ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣನವರು ಸಮೀಕ್ಷೆಯ ಅವಶ್ಯಕತೆ ಬಗ್ಗೆ ಪ್ರಶ್ನಿಸಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರರು ಪ್ರಶ್ನೆಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು
ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸರ್ಕಾರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ, ಹಿಂದಿನ ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ಅಭಿಪ್ರಾಯಗಳು ಎಲ್ಲರಿಗೂ ಇರುತ್ತವೆ. ಒಂದಿಬ್ಬರ ಅಭಿಪ್ರಾಯ ಕೇಳಿಕೊಂಡು ಏನೂ ಮಾಡಲಾಗದು ಎಂದು ಸಚಿವ ಡಾ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

