ಬೆಂಗಳೂರು ಕೃಷಿ ವಿವಿಯ 60ನೇ ವಜ್ರಮಹೋತ್ಸವ: ಕೃಷಿ ಸಚಿವರ ಶ್ಲಾಘನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್‌ಬಿ) ತನ್ನ 60ನೇ ಸಂಸ್ಥಾಪನಾ ದಿನಾಚರಣೆಯನ್ನು ಇಂದು ವಿಜೃಂಭಣೆಯಿಂದ ಆಚರಿಸಿತು. ಆರು ದಶಕಗಳಿಂದ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿರುವ ಈ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಶ್ರೀ ಎನ್‌ಚಲುವರಾಯಸ್ವಾಮಿ ಅವರು ಭಾಗವಹಿಸಿ, ವಿಶ್ವವಿದ್ಯಾಲಯದ ಸಾಧನೆಗಳನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಹಿಸಿರುವುದು ನನಗೆ ಗೌರವ ಮತ್ತು ಸೌಭಾಗ್ಯ. ಕೃಷಿ ಕ್ಷೇತ್ರದಲ್ಲಿ ಯುಎಎಸ್‌ಬಿ ತನ್ನ ವಿಶಿಷ್ಟ ಕೊಡುಗೆಯಿಂದ ರಾಷ್ಟ್ರಕ್ಕೆ ಕೀರ್ತಿಯನ್ನು ತಂದಿದೆ,” ಎಂದು ಹೇಳಿದರು.

- Advertisement - 

ಹಾಗೆಯೇ, “ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ರೈತ ಸಮುದಾಯದ ಸೇವೆಯಲ್ಲಿ ಇನ್ನಷ್ಟು ಉನ್ನತಿಯನ್ನು ಸಾಧಿಸಲಿ,” ಎಂದು ಶುಭ ಹಾರೈಸಿದರು.

ಐತಿಹಾಸಿಕ ಪಯಣ
1899
ರಲ್ಲಿ ಮೈಸೂರಿನ ರಾಜಪ್ರತಿನಿಧಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರು ಹೆಬ್ಬಾಳದಲ್ಲಿ 30 ಎಕರೆ ಜಮೀನು ಕೊಡುಗೆಯಾಗಿ ನೀಡಿದ್ದರಿಂದ ಈ ವಿಶ್ವವಿದ್ಯಾಲಯದ ಆರಂಭವಾಯಿತು. 1913ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ಕೃಷಿ ವಸತಿ ಶಾಲೆ ಸ್ಥಾಪಿಸಿದರು, ಡಾ. ಲೆಸ್ಲೀ ಕೋಲ್‌ಮನ್‌ರವರನ್ನು ಮೊದಲ ಕೃಷಿ ನಿರ್ದೇಶಕರಾಗಿ ನೇಮಿಸಿದರು. 1946ರಲ್ಲಿ ಶ್ರೀ ಎಂ.ಎ. ಶ್ರೀನಿವಾಸನ್‌ರವರ ಪ್ರಯತ್ನದಿಂದ ಹೆಬ್ಬಾಳದ ಪ್ರಾಯೋಗಿಕ ಕ್ಷೇತ್ರವು ಕೃಷಿ ಕಾಲೇಜಾಗಿ ಮೇಲ್ದರ್ಜೆಗೇರಿತು.

- Advertisement - 

1963ರಲ್ಲಿ ವಿಶ್ವವಿದ್ಯಾಲಯವು ಸ್ಥಾಪನೆಯಾಗಿ, 1964ರಲ್ಲಿ ಡಾ. ಕೆ.ಸಿ. ನಾಯಕ್‌ರವರು ಮೊದಲ ಕುಲಪತಿಗಳಾದರು. 1969ರಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣವನ್ನು ಉದ್ಘಾಟಿಸಿದರು. ಇದುವರೆಗೆ 21 ಕುಲಪತಿಗಳು ಈ ಸಂಸ್ಥೆಗೆ ಕೊಡುಗೆ ನೀಡಿದ್ದಾರೆ.

ಇತ್ತೀಚಿನ ಸಾಧನೆಗಳು
2025-2030
ರ ಅವಧಿಗೆ ಯುಎಎಸ್‌ಬಿ ನ್ಯಾಕ್‌ನಿಂದ A+ ಗ್ರೇಡ್ ಪಡೆದಿದೆ. 2025NIRF ಶ್ರೇಯಾಂಕದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ 11ನೇ ಸ್ಥಾನ, ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೊದಲ ಸ್ಥಾನ, ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 37ನೇ ಸ್ಥಾನ ಮತ್ತು ಒಟ್ಟಾರೆ 95ನೇ ಸ್ಥಾನವನ್ನು ಗಳಿಸಿದೆ.

ಸಂಶೋಧನೆಯಲ್ಲಿ 214 ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, 42 ಬಾಹ್ಯ ಅನುದಾನಿತ ಯೋಜನೆಗಳು ಸೇರಿದ್ದು, ಕಳೆದ ವರ್ಷ 240 ಕೋಟಿ ರೂ. ಅನುದಾನವನ್ನು ಪಡೆಯಲಾಗಿದೆ. 2024ರಲ್ಲಿ 5 ಹೊಸ ಬೆಳೆ ತಳಿಗಳು (ಜೋಳ, ಹರಳು, ಸೂರ್ಯಕಾಂತಿ, ಅರಿಶಿಣ, ಕಪ್ಪು ಅರಿಶಿಣ) ಮತ್ತು 26 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿ ಮೇಳ 2024 ರಲ್ಲಿ 34.13 ಲಕ್ಷ ಜನರನ್ನು ಆಕರ್ಷಿಸಿ, 6.17 ಕೋಟಿ ರೂ. ವಹಿವಾಟು ನಡೆಸಿತು. ಕೃಷಿ ಸಂತೆ, ಜೂನ್ 2024ರಿಂದ ಮಾಸಿಕ ಕಾರ್ಯಕ್ರಮವಾಗಿ 20,000ಕ್ಕೂ ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದು, ವಹಿವಾಟು 15.50 ಲಕ್ಷ ರೂ.ಗೆ ಏರಿಕೆಯಾಗಿದೆ. ಜಿಕೆವಿಕೆ ಆವರಣದ ಪೌಷ್ಟಿಕ ಧಾನ್ಯಗಳ ಶ್ರೇಷ್ಠತಾ ಕೇಂದ್ರವು ಜೈವಿಕ ಭಾರತ ಪ್ರಶಸ್ತಿ 2025ರಲ್ಲಿ 3ನೇ ಸ್ಥಾನ ಗಳಿಸಿದೆ.

ಹೆಮ್ಮೆಯ ಹಳೆವಿದ್ಯಾರ್ಥಿಗಳು
ವಿಶ್ವವಿದ್ಯಾಲಯದ ಹಳೆವಿದ್ಯಾರ್ಥಿಗಳಾದ ಡಾ. ಎಸ್. ಅಯ್ಯಪ್ಪನ್ (ನೀಲಿ ಕ್ರಾಂತಿಯ ಶಿಲ್ಪಿ), ಡಾ. ಎಸ್. ರಾಮಸ್ವಾಮಿ (ನಾರ್ತ್‌ವೆಸ್ಟ್ ಕಮಿಷನ್ ಆನ್ ಕಾಲೇಜಸ್‌ನ ಅಧ್ಯಕ್ಷ), ಡಾ. ಕೃಷ್ಣ (ಕೋವ್ಯಾಕ್ಸಿನ್ ಸಂಶೋಧಕ), ಡಾ. ಜಿ. ಪರಮೇಶ್ವರ್ (ಗೃಹ ಸಚಿವರು), ಮತ್ತು ಡಾ. ಜೆ. ರಾಧಾಕೃಷ್ಣನ್ (ತಮಿಳುನಾಡು ಆರೋಗ್ಯ ಕಾರ್ಯದರ್ಶಿ) ರಾಷ್ಟ್ರಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಸರ್ಕಾರದ ಕೊಡುಗೆ
ಕೃಷಿ ಇಲಾಖೆಯ 43 ಪ್ರಯೋಗಾಲಯಗಳು NABL ಮಾನ್ಯತೆ ಪಡೆದ ಮೊದಲ ರಾಜ್ಯವಾಗಿದೆ, ಇದಕ್ಕಾಗಿ 6 ಕೋಟಿ ರೂ. ಅನುದಾನವನ್ನು ಕಲ್ಪಿಸಲಾಗಿದೆ. ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ 5000 ಕಿರು ಘಟಕಗಳ ಸ್ಥಾಪನೆಗೆ 206 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ. ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಈ ವರ್ಷ ಪ್ರವೇಶಾತಿ ಆರಂಭವಾಗಿದೆ.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕುಲಪತಿಗಳು, ಅಧಿಕಾರಿಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ರೈತರು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

 

 

Share This Article
error: Content is protected !!
";