ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾಮಗಾರಿ ಮುಗಿದು 4ವರ್ಷ ಪೂರೈಸಿರುವ ESIC ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶೀಘ್ರ ಉದ್ಘಾಟನೆ ಮಾಡಿ ಆರೋಗ್ಯ ಚಿಕಿತ್ಸಾ ವ್ಯವಸ್ತೆ ಪ್ರಾರಂಭಿಸಬೇಕು ಮತ್ತು ಕಾರ್ಮಿಕರ ESI/PF ವೇತನ ಮಿತಿ ಹಿಂತೆಗೆಯಬೇಕು ಎಂದು ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ನ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಒತ್ತಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಭಾಷೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಅರಹಳ್ಳಿ ಗುಡ್ಡದಹಳ್ಳಿ ಅಪರೆಲ್ ಪಾರ್ಕ್ (KIADB) 2ನೇ ಹಂತದಲ್ಲಿ ಸುಸಜ್ಜಿತವಾದ ಇಎಸ್ಐ (ESI) ಆಸ್ಪತ್ರೆ 17910 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು 85 ಕೋಟಿ ಯೋಜನೆ ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯ ವಿರುವ ಆಸ್ಪತ್ರೆ ನಿರ್ಮಾಣವಾಗಿದೆ. (ಸಲಹಾ ವೆಚ್ಚ ಮತ್ತು ಇತರೆ ವೆಚ್ಚಗಳನ್ನು ಹೊರತುಪಡಿಸಿ) ಕಾರ್ಮಿಕರಿಗೆ ಇದರ ಫಲಾನುಭವಿಗಗಳಿಗೆ ತುರ್ತಾಗಿ ಹಾಗೂ ಉತ್ತಮವಾದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಇಲ್ಲಿ ಇಎಸ್ಐ(ESI) ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.
ಆರೋಗ್ಯವಂತ ಕಾರ್ಮಿಕ ವರ್ಗ ಸಮೃದ್ಧ ಭಾರತ ಎಂದು ಘೋಷಣೆ ನೀಡಿ ಕಳೆದ 12 ವರ್ಷದ ಹಿಂದೆ ಆಗತಾನೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಹಾಗೂ ಅಂದಿನ ಕೇಂದ್ರ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ರವರು ಮತ್ತು ರಾಜ್ಯ ಕಾರ್ಮಿಕ ಸಚಿವರು ಹಾಗೂ ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ಶಾಸಕರು ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ತಮ್ಮ ಭಾಷಣಗಳಲ್ಲಿ ಕೇವಲ 2 ವರ್ಷಗಳಲ್ಲಿ ಆಸ್ಪತ್ರೆ ಉದ್ಘಾಟಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ 12ವರ್ಷಗಳು ಕಳೆದರೂ ಸಹ ಈವರೆಗೂ ಆಸ್ಪತ್ರೆ ಉದ್ಘಾಟನೆಯಾಗಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರು ಅನಾರೋಗ್ಯದಿಂದ ಬೆಂಗಳೂರಿನ ರಾಜಾಜಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಒಮ್ಮೆ ಹೋಗಿಬರಲು ಕಾರ್ಮಿಕರಿಗೆ ಐದು ಗಂಟೆಗಳ ಕಾಲ ಸಮಯ ವ್ಯರ್ಥವಾಗುತ್ತಿದೆ. ಸಾಮಾನ್ಯ ಸಮಯದಲ್ಲಿ ಇಂತಹ ಪರಿಸ್ಥಿತಿ ಇದೆ. ಆದರೆ, ಅನಾರೋಗ್ಯಕ್ಕೆ ಒಳಗಾದ ಕಾರ್ಮಿಕರು ನರಕ ಯಾತನೆಯಲ್ಲಿ ಬೆಂಗಳೂರಿಗೆ ಅಲೆಯುವಂಥಾಗಿದೆ ಇದು ನೋವಿನ ವಿಚಾರವಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಬಳಸುವುದು ಕಾರ್ಮಿಕರ ಸಂಬಳದಲ್ಲಿ ಪ್ರತಿ ತಿಂಗಳು ಕಡಿತ ಮಾಡುವ ಹಣ, ಸರ್ಕಾರ ಇದಕ್ಕಾಗಿ ಯಾವುದೇ ಹಣ ವೆಚ್ಚ ಮಾಡುವುದಿಲ್ಲ.
ಆಸ್ಪತ್ರೆ ನಿರ್ಮಾಣ ಕಾರ್ಯವು ಮುಗಿದು 04ವರ್ಷ ಕಳೆದರೂ ಸಹ ಇನ್ನೂ ಉದ್ಘಾಟನೆಯಾಗಿಲ್ಲ. ಆಸ್ಪತ್ರೆ ಪ್ರಾರಂಭಿಸಿ ಕಾರ್ಮಿಕರಿಗೆ ಚಿಕಿತ್ಸಾ ವ್ಯವಸ್ಥೆ ನೀಡುವುದು ಮರೀಚಿಕೆಯಾಗಿದೆ. ಇದು ವಿಶಾದನಿಯಾ ಸಂಗತಿ. ಸಹಸ್ರಾರು ಕಾರ್ಮಿಕರು ಆಸ್ಪತ್ರೆಯ ಕಾಮಗಾರಿ ಮುಕ್ತಾಯವಾದರೂ ಚಿಕಿತ್ಸೆ ಪಡೆಯುವ ಪ್ರಯೋಜನವಿಲ್ಲದೆ ವಂಚಿತರಾಗಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಇದೇ ಅಕ್ಟೋಬರ್ 19 ಸಿಎಂ ಸಿದ್ದರಾಮಯ್ಯ ಅವರು ಆರ್.ಎಲ್.ಜಾಲಪ್ಪ ಅವರ ಜನ್ಮ ಶತಮಾನೋತ್ಸವಕ್ಕೆ ಬರುತ್ತಿದ್ದಾರೆ. ಅತೀ ಶೀಘ್ರವಾಗಿ ಇಎಸ್ಐಸಿ ಆಸ್ಫತ್ರೆ ಉದ್ಘಾಟನೆ ಮಾಡಿ ಕಾರ್ಮಿಕರಿಗೆ ವೈದ್ಯಕೀಯ ಸೇವೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಘೆರಾವ್ ಹಾಕಲು ನಿರ್ಧರಿಸಲಾಗಿತ್ತು.
ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದು ಕೈಬಿಟ್ಟಿದ್ದು, ಮನವಿ ಸಲ್ಲಿಸಲಿದ್ದೇವೆ. ಆದಷ್ಟೂ ಬೇಗ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ. ಸಿ ಅವರು ಮಾತನಾಡಿ ಇಎಸ್ಐಸಿ (ESIC) ಸೌಲಭ್ಯ ಎಲ್ಲಾ ಕಾರ್ಮಿಕರಿಗೂ ತಕ್ಷಣ ಸಿಗುವಂತಾಗಬೇಕು. ಸುಸಜ್ಜಿತ ಆಸ್ಪತ್ರೆಗಳನ್ನು ಸ್ಥಾಪಿಸಿ ಕೌಲಭ್ಯ ಒದಗಿಸುವ ಸರ್ಕಾರದ ಮತ್ತು ಕಾರ್ಮಿಕರ ರಾಜ್ಯ ವಿಮಾ ನಿಗಮದ ಕಾನೂನು ಬದ್ಧ ಜವಾಬ್ದಾರಿಯಾಗಿರುತ್ತದೆ.
ಕಾರ್ಮಿಕರ ವೇತನ ಮಿತಿ ತೆಗೆದು ಸಂಘಟಿತ ದುಡಿಯುವ ಜನರಿಗೆ ನೈಜ ಅನುಕೂಲ ಕಲ್ಪಿಸಿ.
ಕಾರ್ಮಿಕರ ವೇತನ 21,000 ದಾಟಿದರೆ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಮೂಲವೇತನದ ಮೇಲೆ 0.75% ಕಾರ್ಮಿಕರಿಂದ 3.25% ಮಾಲೀಕರಿಂದ ಕಡಿತವಾಗುತ್ತದೆ.
ಈ ಬೆಲೆ ಏರಿಕೆಯ ಸಂದರ್ಭದಲ್ಲಿ ಆರೋಗ್ಯದ ವೆಚ್ಚ ಜೀವನ ವೆಚ್ಚ ದುಬಾರಿಯಾಗಿದೆ. ಆದ್ದರಿಂದ ವೇತನದ ಮಿತಿಯನ್ನು ತೆಗೆಯಬೇಕು. ಎಲ್ಲಾ ಕಾರ್ಮಿಕರಿಗೂ ಈ ಸೌಲಭ್ಯ ತಕ್ಷಣದಿಂದ ಸಿಗುವಂತಾಗಲು ಸರ್ಕಾರ ಅಗತ್ಯ ಕಾನೂನು ತಿದ್ದುಪಡಿಯ ಕ್ರಮ ಜರುಗಿಸಲು ಮನವಿ ಮಾಡುತ್ತೇವೆ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ವಿಷಕಂಠ ಮಾತನಾಡಿ, ಇದೇ ಅಕ್ಟೋಬರ್-19 ರಂದು ದೊಡ್ಡಬಳ್ಳಾಪುರಕ್ಕೆ ಬರುವ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಲಾಗುತ್ತದೆ ಎಂದರು.
- ತಕ್ಷಣ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗಿರುವ 100 ಹಾಸಿಗೆಗಳ ಇಎಸ್ಐ(ESI) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಬೇಕು. ಆ ಮೂಲಕ ಜಿಲ್ಲೆಯ ಎಲ್ಲಾ ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡಬೇಕು.
- ಕಾರ್ಮಿಕರ ಇ.ಎಸ್.ಐ /ಪಿ.ಎಫ್.ಗಳ ವೇತನ ಮಿತಿ ತೆಗೆಯಬೇಕು. ಮತ್ತು ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಆರೋಗ್ಯಸೇವೆ ಸಿಗಬೇಕು.
- ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ಅಂಗನವಾಡಿ ನೌಕರರಿಗೆ, ಆಟೋ ಚಾಲಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ ಸೇರಿದಂತೆ ಇನ್ನೂ ಮುಂತಾದ ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅಂದರೆ ಸಂಘಟಿತ, ಅಸಂಘಟಿತ ಹಾಗೂ ಯೋಜನಾ ಕಾರ್ಮಿಕರಿಗೆ ಇ.ಎಸ್.ಐ ಸೌಲಭ್ಯ ಒದಗಿಸಬೇಕು.
- ಕೇಂದ್ರ-ರಾಜ್ಯ ಸರ್ಕಾರಗಳು ತಕ್ಷಣ ಸೂಕ್ತ ಕ್ರಮ ಜರುಗಿಸಿ, ಇ.ಎಸ್.ಐ ಆಸ್ಪತ್ರೆಯನ್ನು ಉದ್ಘಾಟಿಸಿ, ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ಎಂದು ಮನವಿ ಸಲ್ಲಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಸಂಘಟನೆಯ ಖಜಾಂಚಿ ಮೋಹನ್ ಬಾಬು.ಎಚ್.ಎನ್, ಉಪಾಧ್ಯಕ್ಷರಾದ ಎನ್.ಕೆ.ಬಸವರಾಜು, ಕಾರ್ಯದರ್ಶಿಗಳಾದ ಎಲ್.ಸಿ.ಸುಮಾ, ಪಿ.ಕೆ.ವೆಂಕಟೇಶ್, ಮಣೀಶ್ ಶರ್ಮಾ ಮುಂತಾದವರು ಉಪಸ್ಥಿತರಿದ್ದರು.

