ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ನವರೇ, 40% ಕಮಿಷನ್ ಎಂಬ ಸುಳ್ಳು ಕಪೋಲಕಲ್ಪಿತ ಆರೋಪ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ತಾವು ಈಗ ಅದ್ಯಾವ ಮುಖ ಇಟ್ಟುಕೊಂಡು ಕಮಿಷನ್ ನಿಜ ಇದ್ದರೆ ಕೋರ್ಟಿಗೆ ಹೋಗಿ ಎಂದು ಗುತ್ತಿಗೆದಾರರಿಗೆ ಹೇಳುತ್ತಿದ್ದೀರಿ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷ ಆರೋಪ ಮಾಡುವ ಮುನ್ನ, ಹಾದಿ ಬೀದಿಯಲ್ಲಿ ಅದೆಂತದೋ PayCM ಸ್ಟಿಕ್ಕರ್ ಅಂಟಿಸುವ ಮುನ್ನ ಕೋರ್ಟ್ ಗೆ ಹೋಗಿ ಎಂದು ಯಾಕೆ ಹೇಳಲಿಲ್ಲ?
ಇಷ್ಟಕ್ಕೂ ಕಂಟ್ರಾಕ್ಟರ್ ಗಳ ಬಿಲ್ ಪಾವತಿಯಲ್ಲಿ ತಮಗೆ ಎಷ್ಟು ಪರ್ಸಂಟೇಜ್ ಕಮಿಷನ್ ಬೇಡಿಕೆ ಇಟ್ಟಿದ್ದೀರಿ? ಇದರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಪಾಲೆಷ್ಟು? ಹೈಕಮಾಂಡ್ ಏಜೆಂಟುಗಳಾದ ಸುರ್ಜೇವಾಲಾ ಹಾಗೂ ಕೆ.ಸಿ ವೇಣುಗೋಪಾಲ್ ಅವರಿಗೂ ಪಾಲಿದೆಯಾ?
ನಾಚಿಕೆಯಾಗಬೇಕು ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ದುಡ್ಡಿಲ್ಲದೆ ಸರ್ಕಾರವನ್ನು ಪಾಪರ್ ಮಾಡಿದ್ದೀರಿ. ಅಪರೂಪಕ್ಕೆ ಕೊಡೋ ಬಿಲ್ಲಿಗೂ 80% ಕಮಿಷನ್ ಬೇಡಿಕೆ ಇಡುತ್ತಿದೀರಿ. ನಿಮ್ಮ ಸರ್ಕಾರದ ಲಜ್ಜೆಗೆಟ್ಟ ಭ್ರಷ್ಟಾಚಾರ, ಕಮಿಷನ್ ದಾಹದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ.
ಇನ್ನೆಷ್ಟು ದಿನ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವ ಉಳಿಸಿ ಕರ್ನಾಟಕ ಉಳಿಸಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

