ಚಂದ್ರವಳ್ಳಿ ನ್ಯೂಸ್, ಹಾಸನ:
ವರ್ಷಕ್ಕೊಂದು ಬಾರಿ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಸಾರ್ವಜನಿಕರ ದರ್ಶನಕ್ಕೆ ಬುಧವಾರವೇ ಬಂದ್ ಆಗಿದೆ.
ಅಕ್ಟೋಬರ್-23 ರಂದು ಗುರುವಾರ ದೇಗುಲದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಮುಂದಿನ ವರ್ಷ ಅಕ್ಟೋಬರ್-29-10-2026 ರಿಂದ ನವೆಂಬರ್-11-11-2026 ರವರೆಗೆ ತೆರೆಯಲಿದೆ. ಈ ವರ್ಷ ಭೇಟಿ ನೀಡಿದ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಆದಾಯವೂ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2025 ನೇ ವರ್ಷದ ಹಾಸನಾಂಬೆ ದರ್ಶನ ಮುಕ್ತಾಯ ಆಗಿದೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದಿದ್ದು, ಉಳಿದಂತೆ ಸ್ಥಳೀಯರಿಗೆ ರಾತ್ರಿ ಕೂಡ ದರ್ಶನ ಆಗಿದೆ.
ಶಾಸ್ತ್ರದ ಪ್ರಕಾರ ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ. ಎಲ್ಲರ ಸಹಕಾರದಿಂದ, ಶಾಸಕರು, ಸಂಸದರ ಸಹಕಾರ ಹಾಗೂ ಜಿಲ್ಲಾಡಳಿತ ಸಹಕಾರದಿಂದ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ನಡೆದಿದೆ. ಅದಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರು.
ಹಾಸನಾಂಬೆ ಉತ್ಸವ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದ ಸಚಿವರು, ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಅತ್ಯಂತ ಯಶಸ್ವಿಯಾಗಿ ದರ್ಶನ ಭಾಗ್ಯ ಎಲ್ಲರಿಗೂ ದೊರೆತಿದೆ. ಸಾಮಾನ್ಯ ಜನರಿಗೆ ನೂಕು ನುಗ್ಗಲು ಇಲ್ಲದೆ ಸರಳವಾಗಿ ಭಕ್ತರ ದರ್ಶನ ಆಗಿದೆ. ಇದು ನಮಗೆ ಅತೀವ ಸಂತೋಷ ನೀಡಿದೆ. ಎಲ್ಲಾ ಜನರು ನಗುನಗುತ್ತಾ ದರ್ಶನ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಬಂದಿದ್ದಾರೆ. ಹಾಸನದ ಕೀರ್ತಿ ಎಲ್ಲೆಡೆ ಪ್ರಜ್ಚಲಿಸಿದೆ. ಈ ವರ್ಷ 26,13,000 ಭಕ್ತರು ದರ್ಶನ ಮಾಡಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ 2,18,20,000 ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕಿಂದ ಆದಾಯ ಕೂಡ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

