ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಚುನಾವಣೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಕಳ್ಳತನ ನಡೆದಿದೆ. 25 ಲಕ್ಷ ಮತದಾರರು ನಕಲಿ ಮತ್ತು ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡು ಕರ್ನಾಟಕದಂತೆ ಅಲ್ಲೂ ಅಕ್ರಮ ನಡೆದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮಹದೇವಪುರ, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಬಯಲು ಮಾಡಿದ್ದರು. ಈಗ ರಾಹುಲ್ ಗಾಂಧಿ ಅವರು ಹರಿಯಾಣ ರಾಜ್ಯದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಟ್ಟಿದ್ದಾರೆ ಎಂದು ಸಿಎಂ ತಿಳಿಸಿದರು.
ಪಾರದರ್ಶಕತೆಯಿಂದ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡುವ ಮೂಲಕ ಪ್ರಜಾತಂತ್ರದ ರಕ್ಷಣೆ ಮಾಡಬೇಕಿರುವ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಹೇಗೆ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂಬುದಕ್ಕೆ ರಾಹುಲ್ ನೀಡಿರುವ ದಾಖಲೆಗಳೇ ಸಾಕ್ಷಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯರ ಹೆಸರುಗಳನ್ನಷ್ಟೇ ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಬಿಜೆಪಿ ಮತ್ತು ಚುನಾವಣಾ ಆಯೋಗ, ಹರಿಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬ್ರೆಜಿಲ್ನ ರೂಪದರ್ಶಿಯ ಗುರುತನ್ನು ಕೂಡ ತನ್ನ ಮತಗಳ್ಳತನಕ್ಕೆ ಬಳಕೆ ಮಾಡಿಕೊಂಡಿರುವುದು ಅವರ ನಿರ್ಲಜ್ಜತನಕ್ಕೆ ಸಾಕ್ಷಿ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನ ಹೋಗುವುದು ಗ್ಯಾರಂಟಿ ಎಂದು ಸಿಎಂ ಭವಿಷ್ಯ ನುಡಿದಿದ್ದಾರೆ.
5 ಲಕ್ಷಕ್ಕೂ ಅಧಿಕ ನಕಲಿ ಮತದಾರರನ್ನು ಗುರುತಿಸಲು ಸಾಧ್ಯವಾಗದಂತಹ ಫೋಟೋ ಬಳಸಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಕಳವು ಮಾಡಲಾಗಿದೆ. ಹೀಗೆ ಒಟ್ಟು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಅಂದರೆ ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8 ಜನರ ಪೈಕಿಒಂದು ನಕಲಿಮತ ಎನ್ನುವುದು ಸ್ಪಷ್ಟವಾಗಿದೆ.
ದೇಶದ ಬಹುತೇಕ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದರೂ, ಹರಿಯಾಣದ ಜನ ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲೇಬೇಕು ಎಂಬ ದೃಢ ಸಂಕಲ್ಪ ಮಾಡಿದರೂ ಬಿಜೆಪಿ ಹೇಗೆ ಬಹುಮತ ಪಡೆದು ಸರ್ಕಾರ ರಚಿಸಿತು ಎನ್ನುವ ಅನುಮಾನಕ್ಕೆ ರಾಹುಲ್ ಗಾಂಧಿಯವರು ಉತ್ತರ ನೀಡಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಹಾರಿಕೆ ಉತ್ತರ ನೀಡಿ ಪಲಾಯನ ಮಾಡುತ್ತಿದ್ದ, ಆರೋಪ ಮಾಡಿದವರನ್ನೇ ಪ್ರಮಾಣ ಮಾಡಿ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಬಾರಿಯಾದರೂ ತನ್ನ ಮಾಲೀಕರ ರಕ್ಷಣೆಯ ದುಸ್ಸಾಹಸಕ್ಕೆ ಕೈಹಾಕದೆ ಸತ್ಯ ಒಪ್ಪಿಕೊಂಡು, ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

