ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ದೊಡ್ಡಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಪುರುಷೋತ್ತಮ್ ಅವರಿಗೆ ದೊಡ್ಡಬಳ್ಳಾಪುರ ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ್ ಅವರು ನ.2ರಂದು ನಡೆದ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಿದ ತಾಲೂಕಿನಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಗುತ್ತಿಗೆದಾರನಾಗಿ ತಾಲೂಕಿನಾದ್ಯಂತ ಕೆಲಸ ಮಾಡಿದ್ದೇನೆ.
ಇನ್ನು ಮುಂದೆ ರೈತರ ಪರವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಗುತ್ತಿಗೆದಾರರಿಗೆ ಹಾಗೂ ತಾಲೂಕಿನ ರೈತರಿಗೆ ಟಿಎಪಿಎಂಸಿಎಸ್ ನಿಂದ ಸಿಗುವ ಸೌಲಭ್ಯಗಳನ್ನು ನೇರವಾಗಿ ಸಿಗುವಂತೆ ಪ್ರಯತ್ನಪಡುತ್ತೇನೆ. ನಾನು ಗೆಲುವನ್ನು ಗುತ್ತಿಗೆದಾರರು ಎಲ್ಲರು ಸೇರಿಸಂಭ್ರಮಿಸಿ ನನಗೆ ಅಭಿನಂದನೆ ಸಲ್ಲಿಸುತ್ತಿರುವುದಕ್ಕೆ ನಾನು ಅವರಿಗೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಂತರ ಗುತ್ತಿಗೆದಾರ ಸಂಘದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ಗುತ್ತಿಗೆದಾರರ ಸಂಘ ಪ್ರಾರಂಭವಾಗಿ ಸುಮಾರು 30-40ವರ್ಷಗಳು ಕಳೆದಿವೆ. ಗುತ್ತಿಗೆದಾರರ ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಅದೇ ರೀತಿ ಟಿಎಪಿಎಂಸಿಎಸ್ ನ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಜಯಶೀಲರಾದ ಪುರುಷೋತ್ತಮ್ ಅವರಿಗೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆಎಂದರು.
ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಲು ಸಚಿವರ ಗಮನಕ್ಕೆ ಕಾಲಕಾಲಕ್ಕೆ ತರುತ್ತಿರುತ್ತಿದ್ದೇವೆ. ಕೆಲವೊಂದು ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತೇವೆ. ಸದ್ಯ ಗುತ್ತಿಗೆದಾರರಿಗೆ ಕೆಲಸಗಳು ಸಿಗುತ್ತಿಲ್ಲ. ಎಲ್ಲವನ್ನೂ ನಿರ್ಮಿತಿ ಕೇಂದ್ರಕ್ಕೆ ವಹಿಸುತ್ತಿರುವದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದರು.
ಈ ವೇಳೆ ಉಪಾಧ್ಯಕ್ಷ ಕೆ.ಬಿ ಬಚ್ಚೇಗೌಡ, ಖಜಾಂಚಿ ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ವಿ.ಲಕ್ಷ್ಮೀಕಾಂತ್, ಗುತ್ತಿಗೆದಾರರಾದ ಹರೀಶ್, ಚನ್ನೇಗೌಡ, ಬ್ರಹ್ಮದೇವ, ರಾಜಣ್ಣ, ನಂದಕುಮಾರ್, ಕೆಂಪೇಗೌಡ ಸೇರಿದಂತೆ ಇತರೆ ಗುತ್ತಿಗೆದಾರರು ಉಪಸ್ಥಿತರಿದ್ದರು.

