ಚಂದ್ರವಳ್ಳಿ ನ್ಯೂಸ್, ಶ್ರೀನಗರ (ಜಮ್ಮು ಕಾಶ್ಮೀರ):
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣ ಸಂಬಂಧ ಕಾಶ್ಮೀರದ ಮತ್ತೊಬ್ಬ ವೈದ್ಯನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಅಲ್ಲದೆ, ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಸ್ಫೋಟದಲ್ಲಿ ಈವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪೈಕಿ ಮೃತ ಪಟ್ಟಿರುವ ಎಂಟು ಜನರನ್ನು ಗುರುತಿಸಲಾಗಿದೆ.
ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಡಾ.ತಜಮುಲ್ ಅಹ್ಮದ್ ಮಲಿಕ್ ಎಂಬಾತನೇ ವಶಕ್ಕೆ ಪಡೆಯಲಾದ ಆರೋಪಿ. ಈತ ಕಣಿವೆನಾಡಿನ ತೃತೀಯ ದರ್ಜೆ ಸರ್ಕಾರಿ ಆಸ್ಪತ್ರೆಯಾದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.
ಪ್ರಕರಣದಲ್ಲಿ ಯಾವ ಕಾರಣ, ಹಿನ್ನೆಲೆಯ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿರುವ ‘ವೈಟ್ ಕಾಲರ್‘ ಟ್ರಾನ್ಸ್-ಸ್ಟೇಟ್ ಭಯೋತ್ಪಾದನಾ ಘಟಕದಲ್ಲಿ ಹೆಸರು ಕೇಳಿಬಂದಿದೆ ಎನ್ನಲಾದ ಕಾಶ್ಮೀರದ ಐದನೇ ವೈದ್ಯ ಈತನಾಗಿದ್ದಾನೆ.
ಈ ಸ್ಫೋಟದಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರತಾಗಿ, ಹರಿಯಾಣದ ಫರಿದಾಬಾದ್ ಮತ್ತು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಸೇರಿದಂತೆ ಡಾ. ಉಮರ್ ನಬಿ ಎಂಬಾತ ಕೂಡ ಸಾವನ್ನಪ್ಪಿರುವ ಶಂಕೆ ಇದೆ. ಕಳೆದ ತಿಂಗಳಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರು.
ಇದಕ್ಕೂ ಮುನ್ನ, ಫರಿದಾಬಾದ್ನ ಅಲ್ ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪುಲ್ವಾಮಾದ ಡಾ.ಮುಜಮ್ಮಿಲ್ ಶಕೀಲ್ ಮತ್ತು ಸಹರಾನ್ಪುರದ ಫೇಮಸ್ ಮೆಡಿಕೇರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್ನಾಗ್ನ ಡಾ.ಅದೀಲ್ ಅಹ್ಮದ್ ರಾಥರ್ ಅವರನ್ನು ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿಟಿವಿ ದೃಶ್ಯಾವಳಿ:
ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ಕ್ಷಣವನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿ ಬುಧವಾರ ಬೆಳಕಿಗೆ ಬಂದಿದೆ.
ಕೆಂಪು ಕೋಟೆ ಕ್ರಾಸಿಂಗ್ನಲ್ಲಿ ಅಳವಡಿಸಲಾದ ಕಣ್ಗಾವಲು ಕ್ಯಾಮೆರಾದಲ್ಲಿ ದಾಖಲಾಗಿರುವ ಈ ದೃಶ್ಯವು, ಜನನಿಬಿಡ, ವಾಹನಗಳು ಸಂಚರಿಸುತ್ತಿರುವಾಗಲೇ ಹಠಾತ್ ಬೆಂಕಿಯ ಜ್ವಾಲೆ ಆವರಿಸಿರುವುದನ್ನು ಕಾಣಬಹುದು.
ಸೋಮವಾರ ಸಂಜೆ 6.50ರ ಸುಮಾರಿಗೆ ಸಂಭವಿಸಿದ ಕಾರು ಸ್ಫೋಟದಲ್ಲಿ ಕೆಂಪು ಬಲೂನ್ ಸಿಡಿದಂತೆ ಗೋಚರಿಸುತ್ತಿದೆ. ಬಳಿಕ ಜನರು ರಕ್ಷಣೆಗಾಗಿ ಓಡುತ್ತಿದ್ದು, ಭಯಭೀತ ವಾತಾವರಣ ಸೃಷ್ಟಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈಗಾಗಲೇ ಪೊಲೀಸರು ಮೂವರು ವೈದ್ಯರು ಸೇರಿದಂತೆ 8 ಜನ ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೆ ಕಾರು ಸ್ಫೋಟಕ್ಕೂ ಮೊದಲು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಭಯಾನಕ ಘಟನೆ ಸಂಭವಿಸಿತ್ತು.

