ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಹೊರಟಿರುವ ಜಲಾಶಯ ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಈ ಅರ್ಜಿ ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ತೀರ್ಪು ನೀಡಿ ಆದೇಶಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಯನ್ನು ಆಲಿಸಿತು.
ತಜ್ಞರ ಮಂಡಳಿಯು ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಈ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ. ಯಾವುದೇ ಸಂದರ್ಭದಲ್ಲಿ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕ ನೀರನ್ನು ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ತಿಳಿಸಿದೆ.
ಒಂದು ವೇಳೆ ಕರ್ನಾಟಕವು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ ಅದು ನ್ಯಾಯಾಂಗ ನಿಂದನೆ ಆಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಲ್ಲಿಸಿರುವ ಈ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.
ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಅನುಮೋದಿಸಿದರೆ, ಕಾನೂನಿನಲ್ಲಿ ಅನುಮತಿಸಲಾದ ಕ್ರಮಗಳನ್ನು ತೆಗೆದುಕೊಳ್ಳಲು ಪಕ್ಷಗಳು ಸ್ವತಂತ್ರವಾಗಿರುತ್ತವೆ. ನೀರಿನ ಹಂಚಿಕೆ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಂಸ್ಥೆ ನಿರ್ಧರಿಸಬೇಕು ಎಂದು ಹೇಳಿದೆ.
ಮೇಕೆದಾಟು ಅಣೆಕಟ್ಟಿನ ಡಿಪಿಆರ್ ತಯಾರಿಸಲು ಸಿಡಬ್ಲ್ಯೂಸಿ ಅಂಗೀಕರಿಸಿದ ಆದೇಶಕ್ಕೆ ತಮಿಳುನಾಡು ಸಲ್ಲಿಸಿದ ಅಹವಾಲು ಅಕಾಲಿಕವಾಗಿದೆ. ಡಿಪಿಆರ್ ಮತ್ತು ಸಿಡಬ್ಲ್ಯೂಎಂಎ ಅಭಿಪ್ರಾಯದ ನಂತರವೇ ಸಿಡಬ್ಲ್ಯೂಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠ ಹೇಳಿದೆ.
ರಾಜ್ಯದ ಆಕ್ಷೇಪಣೆಗಳು ಹಾಗೂ ತಜ್ಞ ಸಂಸ್ಥೆಗಳಾದ ಸಿಡಬ್ಲೂಆರ್ಸಿ ಮತ್ತು ಸಿಡಬ್ಲ್ಯೂಎಂಎ ಗಳ ಅಭಿಪ್ರಾಯವನ್ನು ಪರಿಗಣಿಸಿದ ನಂತರವೇ ಯೋಜನೆಯನ್ನು ಅನುಮೋದಿಸಲಾಗುವುದು ಎಂದು ಪೀಠ ಹೇಳಿದೆ.
ಕಾವೇರಿ ಜಲಾನಯನ ಪ್ರದೇಶದ ನೀರಿನ ವಿಚಾರದಲ್ಲಿ ವಿವಾದವನ್ನು ಈ ನ್ಯಾಯಾಲಯ ನಿರ್ಧರಿಸಿದೆ. ಯಾವುದೇ ಸಮಸ್ಯೆಗಳನ್ನು ಸಿಡಬ್ಲ್ಯೂಆರ್ಸಿ, ಸಿಡಬ್ಲ್ಯೂಸಿ ಮತ್ತು ಸಿಡಬ್ಲ್ಯೂಎಂಎ ಮುಂದೆ ಎತ್ತಬಹುದು. ಅಧಿಕಾರಿಗಳು ಈ ಕುರಿತು ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಪೀಠ ತಿಳಿಸಿದೆ.
ತಮಿಳುನಾಡು ರಾಜ್ಯಕ್ಕೆ ಬಿಡಬೇಕಾದ ನೀರನ್ನು ಕರ್ನಾಟಕ ಪೂರೈಸುತ್ತಿಲ್ಲ ಎಂದು ಸಿಡಬ್ಲೂಆರ್ಸಿ ಮತ್ತು ಸಿಡಬ್ಲ್ಯೂಎಂಎ ಹೊರಡಿಸಿದ ಆದೇಶಗಳ ಪ್ರಕಾರ ತಮಿಳುನಾಡು ವಾದ ಮಂಡಿಸಿತು. ಇದಕ್ಕೆ ಪ್ರತಿಯಾಗಿ ಸಿಎಂಡಬ್ಲ್ಯೂಎ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ನೀರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಪರ ವಕೀಲರು ವಾದಿಸಿದರು.

