ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬದುಕುತ್ತಿರುವ ಗಂಜಿ ಗಿರಾಕಿ ಡಿ.ಕೆ ಶಿವಕುಮಾರ್, ನಿಮ್ಮ ಧಮ್ಕಿಗೆ ಇಲ್ಲಿ ಯಾರೂ ಜಗ್ಗುವುದಿಲ್ಲ. ನಿಮ್ಮ ಹಳೇ ಚಾಳಿಗೆ ರೌಡಿಸಂಗೆ ಯಾರೂ ಬೆದರಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.
ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಮೂರ್ಖನಂತೆ ಉತ್ತರ ಕೊಡುವ ನಿಮಗೆ ಅವರ ಪೂರ್ವಾಪರ ತಿಳಿದುಕೊಳ್ಳದೆ ಮಾತನಾಡುವ ಚಟ. ಕುಮಾರಸ್ವಾಮಿಯವರ ವಿಚಾರದಲ್ಲಿ ನೀವು ನಾಲಿಗೆ ಜಾರುತ್ತಿರುವುದು ಇದೇ ಮೊದಲಲ್ಲ. ತೀರಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿಸಂಸ್ಥೆ ಜತೆ ಕುಮಾರಸ್ವಾಮಿಯವರ ಬಗ್ಗೆ ನಾಲಿಗೆ ಜಾರಿ ಪೆದ್ದರಾಗಿದ್ದೀರಿ!.
ಅಧಿಕಾರದ ಲಾಲಸೆಗೆ ಯಾರು ಏನು ಹೇಳಿದ್ದಾರೆ, ಇಲ್ಲವೋ ಎಂಬುದನ್ನು ತಿಳಿಯದೇ ಅವಿವೇಕಿಯಂತೆ ವರ್ತಿಸುತ್ತಿದ್ದೀರಿ. ನಿಮ್ಮ ಶೈಲಿಯಲ್ಲಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ನಮಗೆ ಬರೋದಿಲ್ಲ ಎಂಬ ಭಂಡತನವೇ ನಿಮಗೆ? ನಿಮ್ಮ ಮಾತು, ನಿಮ್ಮ ಪದ ಬಳಕೆ ನೋಡಿದರೆ ನಿಮ್ಮ ಮಾನಸಿಕ ಸ್ವಾಸ್ಥ್ಯ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಬಗ್ಗೆ ಕರ್ನಾಟಕದ ಜನರು ಭೀತಿಗೊಂಡಿರುವುದಕ್ಕೆ ಇದೂ ಒಂದು ಕಾರಣ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಬ್ಲಾಕ್ ಮೇಲ್ ಗಿರಾಕಿ, ಮತಿಗೇಡಿ ಡಿಕೆಶಿ, ಮೊದಲು ಹೆಚ್.ಡಿ. ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಆ ಹೇಳಿಕೆನೀಡಿದ್ದಾರೆಯೇ? ಅದನ್ನು ಸಾಬೀತುಪಡಿಸಿ. ನೀವು ಮಾನ+ನಷ್ಟ!!! ಮೊಕದ್ದಮೆ ಹೂಡುವುದು ನಂತರದ ಮಾತು. ಅದಕ್ಕೂ ಮೊದಲು ಮಾನವೂ ಇರಬೇಕು, ಮತಿಯೂ ಇರಬೇಕು. ಇವೆರಡೂ ನಿಮಗೆ ಇದ್ದಿದ್ದರೆ ನಿಮ್ಮ ನಾಲಿಗೆಯಿಂದ ಇಂಥ ಅಣಿಮುತ್ತು ಉದುರುತ್ತಿರಲಿಲ್ಲ.
ಮಾತೆತಿದ್ದರೆ ಶ್ಲೋಕ ಇನ್ನೊಂದು ಹೇಳುವುದಲ್ಲ, ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ‘; ಮೊದಲು ದಾಸರು ಹೇಳಿರುವ ಈ ಸರಳ ಪದವನ್ನು ಓದಿ ಅರ್ಥ ಮಾಡಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

