ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸರ ಸೋಗಿನಲ್ಲಿ ರೂಂಗೆ ನುಗ್ಗಿ ಸುಲಿಗೆ ಮಾಡಿದ 6 ಜನ ಆರೋಪಿಗಳನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮುಹಮ್ಮದ್ ನಜಾಶ್ (24), ಸರುಣ್ (38), ಬೆಂಗಳೂರಿನ ವಿಷ್ಣು ಕೆ.ಟಿ (23), ದಿವಾಕರ್ (34), ಮಧುಕುಮಾರ್ (32) ಹಾಗೂ ಕಿರಣ್ (29) ಬಂಧಿತ ಆರೋಪಿಗಳಾಗಿದ್ದಾರೆ.
ಮಾರತ್ ಹಳ್ಳಿಯ ರೂಂವೊಂದಕ್ಕೆ ಕಳೆದ ನವೆಂಬರ್-7ರಂದು ರಾತ್ರಿ ನುಗ್ಗಿದ್ದ ಆರೋಪಿಗಳು, ಯುವತಿಯರ ಬಳಿಯಿದ್ದ ಮೊಬೈಲ್ ಫೋನ್ಗಳನ್ನ ಕಿತ್ತುಕೊಂಡು ಪರಾರಿಯಾಗಿದ್ದರು.
ದೂರುದಾರ ಯುವತಿಗೆ ಟೀ ಅಂಗಡಿಯೊಂದರಲ್ಲಿ ಮುಹಮ್ಮದ್ ನಜಾಶ್ ಪರಿಚಯವಾಗಿತ್ತು. ನವೆಂಬರ್ 7ರಂದು ಆತನ ಬರ್ತ್ ಡೇ ಇದ್ದಿದ್ದರಿಂದ ಆಚರಿಸಲು ದೂರುದಾರ ಯುವತಿ ತನ್ನ ರೂಂಗೆ ಆಹ್ವಾನಿಸಿದ್ದಳು. ಅದರಂತೆ ಯುವತಿಯ ರೂಂಗೆ ನಜಾಶ್ ತೆರಳಿದ್ದ.
ರೂಂನಲ್ಲಿದ್ದಾಗ ರಾತ್ರಿ 2 ಗಂಟೆಗೆ ಆರೋಪಿಗಳು ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ತಾವು ಪೊಲೀಸರು ಎಂದು ಹೇಳುತ್ತ ಬೆದರಿಸಿದ್ದ ಆರೋಪಿಗಳು, ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನಕಿತ್ತುಕೊಂಡಿದ್ದರು.
ಬಳಿಕ 5 ಲಕ್ಷ ನಗದು ಹಣ ನೀಡದಿದ್ದರೆ ಮತ್ತೊಮ್ಮೆ ಬರುವುದಾಗಿ ಬೆದರಿಸಿ ಕಾಲ್ಕಿತ್ತಿದ್ದರು. ಘಟನೆಯ ಬಳಿಕ ಯುವತಿ ಹೆಚ್ಎಎಲ್ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳನ್ನ ಬಂಧಿಸಿ ತನಿಖೆ ಕೈಗೊಂಡಾಗ ಕೃತ್ಯದಲ್ಲಿ ಯುವತಿಯ ಪರಿಚಿತ ನಜಾಶ್ನ ಕೈವಾಡ ಇರುವುದು ಬಯಲಾಗಿದೆ.
ಆರೋಪಿಗಳ ಪೈಕಿ ಸರುಣ್ ಈ ಹಿಂದೊಮ್ಮೆ ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಸದ್ಯ ಆರೂ ಜನ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

