ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೆಕ್ಕೆಜೋಳ ಖರೀದಿ ಹಾಗೂ ಎಥೆನಾಲ್ ಹಂಚಿಕೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಶನಿವಾರ ವಿಧಾನಸೌಧದ ಸಭಾಂಗಣದಲ್ಲಿ ಸಭೆ ನಡೆಸಿ, ಸರ್ಕಾರದ ಮುಂದಿರುವ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ ಯಾವ ಡಿಸ್ಟಿಲರಿಗಳು ಎಷ್ಟು ಮೆಕ್ಕೆಜೋಳ ಖರೀದಿಸಬೇಕು ಎಂಬ ಬಗ್ಗೆ ಕೃಷಿ ಮಾರುಕಟ್ಟೆ ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದ್ದು, ಇದರ ಪ್ರಕಾರ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು.

- Advertisement - 

ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಧಾನ್ಯ ಆಧಾರಿತ ಡಿಸ್ಟಿಲರಿಗಳು ನಾಫೆಡ್/ಎನ್‌ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಹೊರಡಿಸಿದೆ. ಇದರ ಪ್ರಕಾರ ಎಲ್ಲಾ ಡಿಸ್ಟಿಲರಿಗಳು ಕಾರ್ಯ ನಿರ್ವಹಿಸಬೇಕಾಗಿದೆ.

ಎಥೆನಾಲ್ ಕೋಟಾ ನಿಗದಿ, ಮೆಕ್ಕೆಜೋಳ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೂ ಮೆಕ್ಕೆಜೋಳ ಬೆಳೆಗಾರರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ.

- Advertisement - 

ಡಿಸ್ಟಿಲರಿಗಳು ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ದರ ನೀಡಿ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದರೆ, ಜಿಲ್ಲಾಡಳಿತದ ಮೂಲಕ ಸಹಕಾರ ನೀಡಲಾಗುವುದು.

ಈಗಾಗಲೇ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯದ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಹಾಗೂ ಡಿಸ್ಟಿಲರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇನೆ.

ಮೆಕ್ಕೆಜೋಳದ ನಾಫೆಡ್ ಪೂರ್ವ ನಿರ್ಧಾರಿತ ಖರೀದಿ ಬೆಲೆ ಕ್ವಿಂಟಾಲ್‌ಗೆ ರೂ.2,639 ಇದ್ದು, ಇದರಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.2,400 ಕನಿಷ್ಟ ಬೆಂಬಲ ಬೆಲೆ ಮೂಲಕ ರೈತರಿಗೆ ನೇರವಾಗಿ ಪಾವತಿಯಾಗಲಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿಗೆ ಡಿಸ್ಟಿಲರಿಗಳಿಗೆ ಅವಕಾಶ ನೀಡಲಾಗಿದ್ದು, ಈ ಕುರಿತು ಡಿಸ್ಟಿಲರಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ.

ರಾಜ್ಯದಲ್ಲಿ ಧಾನ್ಯ ಮಾತ್ರ ಆಧಾರಿತ ಮೂರು ಡಿಸ್ಟಿಲರಿಗಳಿಗೆ ಒಟ್ಟು 94,400 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, 2,48,461 ಮೆ.ಟನ್ ಮೆಕ್ಕೆಜೋಳದ ಅವಶ್ಯಕತೆ ಇದೆ. 7 ಡ್ಯುಯಲ್ ಫೀಡ್‌ಸ್ಟಾಕ್ ಡಿಸ್ಟಿಲರಿಗಳಿಗೆ 1,90,751 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, 5,02,056 ಮೆ.ಟನ್ ಮೆಕ್ಕೆಜೋಳದ ಅವಶ್ಯಕತೆಯಿದೆ.

ನಿಯಮಾನುಸಾರ ಡಿಸ್ಟಿಲರಿಗಳು ರೈತರಿಂದ ಮೆಕ್ಕೆಜೋಳ ಖರೀದಿಸಿ, ರೈತರ ಹಿತ ಕಾಯುವ ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕು.

ಸಚಿವರಾದ ಹೆಚ್.ಕೆ.ಪಾಟೀಲ್ಎನ್.ಚಲುವರಾಯ ಸ್ವಾಮಿ, ಆರ್.ಬಿ.ತಿಮ್ಮಾಪುರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಡಿಸ್ಟಿಲರಿಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

 

Share This Article
error: Content is protected !!
";