ಚಂದ್ರವಳ್ಳಿ ನ್ಯೂಸ್, ಹರಪ್ಪನಹಳ್ಳಿ:
ಮದುವೆಯಾದ ಮರುದಿನವೇ ವರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬಂಡ್ರಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಿವಮೊಗ್ಗ ಮೂಲದನು ಎನ್ನಲಾಗಿದೆ. ಸಂಭ್ರಮದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಹೊಸಕೊಪ್ಪ ನಿವಾಸಿಯಾಗಿರುವ ರಮೇಶ್(30) ಮೃತಪಟ್ಟಿದ್ದಾರೆ. ನವೆಂಬರ್ 30ರಂದು ಶಿವಮೊಗ್ಗದ ಬಿ. ಹೆಚ್. ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಮಧು ಮತ್ತು ರಮೇಶ್ ಇವರ ವಿವಾಹ ನಡೆದಿತ್ತು.
ಮದುವೆಯ ನಂತರ ಡಿ.1 ರಂದು ವಧುವಿನ ಮನೆಗೆ ತೆರಳಲು ದಂಪತಿಗಳು ಹರಪ್ಪನಹಳ್ಳಿಯ ಬಂಡ್ರಿಗೆ ಆಗಮಿಸಿದ್ದರು.
ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಮನೆಗೆ ದಂಪತಿಯನ್ನು ಬರಮಾಡಿಕೊಳ್ಳಲಾಗಿತ್ತು.
ದಂಪತಿಗಳು ದೇವರ ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ರಮೇಶ್ ಹೃದಯಾಘಾತದಿಂದ ಹಠಾತ್ ಕುಸಿದು ಬಿದ್ದಿದ್ದರು.
ತಕ್ಷಣ ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮದುವೆಯ ಮರುದಿನವೇ ಗಂಡನನ್ನು ಕಳೆದುಕೊಂಡ ವಧುವಿನ ಆಕ್ರಂದನ ಮುಗಿಲು ಮುಟ್ಟಿದೆ.

