ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಮೊದಲ ಹಂತದಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಬೆಂಗಳೂರುನ ವಿಕಾಸಸೌಧದಲ್ಲಿ ಕರೆಯಲಾಗಿದ್ದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲು ಸಭೆಯಲ್ಲಿ ಸಚಿವರು ಚರ್ಚಿಸಿದರು.
ಸದರಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ಇವರು ವರದಿಸುತ್ತಾ ಹಿರಿಯೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ವಿವರವಾದ ಯೋಜನಾ ಅಂದಾಜು 206.00 ಕೋಟಿಗಳಿಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಸದರಿ ಪ್ರಸ್ತಾವನೆಗೆ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಯೋಜನಾ ವರದಿ ಮೊತ್ತ ಹೆಚ್ಚಾಗಿರುವುದರಿಂದ 02 ಹಂತಗಳಲ್ಲಿ ಕೈಗೊಳ್ಳಲು ನಿರ್ದೇಶಿಸಿದ್ದರಿಂದ, ತಾಂತ್ರಿಕವಾಗಿ ಪರಿಶೀಲಿಸಿ ಹಿರಿಯೂರು ನಗರದ ದಕ್ಷಿಣ ಭಾಗವಾದ ವೇದಾವತಿ ನದಿಯಿಂದ ಬಲಭಾಗದ ಹಳೆಯ / ಹೃದಯ ಭಾಗದ ಪ್ರದೇಶಕ್ಕೆ ಮೊದಲನೇ ಹಂತದ ಯೋಜನಾ ವರದಿಯನ್ನು 122 ಕೋಟಿಗಳಿಗೆ ತಯಾರಿಸಿ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲಾಗಿದೆ.
ಸರ್ಕಾರವು 100 ಕೋಟಿಗಳಿಗೆ ಸೀಮಿತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಪ್ರಸ್ತುತ ಸದರಿ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು, ಜನವರಿ 2026ರೊಳಗೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಗೊಳಿಸಬಹುದಾಗಿರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.
ಒಳಚರಂಡಿ ಯೋಜನೆ ಕಾಮಗಾರಿಯಲ್ಲಿ ಹಿರಿಯೂರು ನಗರದ ದಕ್ಷಿಣ ಭಾಗದ 25 ವಾರ್ಡ್ಗಳಲ್ಲಿ ಕಾಮಗಾರಿ ನಡೆಯಲಿದ್ದು, ವಿವಿಧ ವ್ಯಾಸದ ಪೈಪ್ಗಳ ಮೂಲಕ ಮಲಿನ ನೀರು ಕೊಳವೆ ಮಾರ್ಗ 109. ಕಿ.ಮೀ.ಉದ್ದದಲ್ಲಿ ಹಾದುಹೋಗಲಿದ್ದು, 3691 ಯಂತ್ರಗುಂಡಿಗಳನ್ನು ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ-4 ರ ಬೈಪಾಸ್ ವೇದಾವತಿ ನದಿಯ ದಕ್ಷಿಣ ದಂಡೆಯಲ್ಲಿ ವೆಟ್ವೆಲ್ ಹಾಗೂ ಸಂಬಂಧಿಸಿದ ಘಟಕಗಳನ್ನು ನಿರ್ಮಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ತಿಳಿಸಿದರು.
ಇದಲ್ಲದೇ ಹಳೆಯ ರಾಷ್ಟ್ರೀಯ ಹೆದ್ದಾರಿ-4 ರ ವೇದಾವತಿ ನದಿಯ ಸೇತುವೆ ಬಳಿ ವೆಟ್ವೆಲ್ ಹಾಗೂ ಸಂಬಂಧಿಸಿದ ಘಟಕಗಳನ್ನು (ಸಾಗರ್ ರೆಡ್ಡಿ ಹೋಟೆಲ್ ಎದುರು) ನಿರ್ಮಿಸಲಾಗುವುದು. 02 ಸಂಖ್ಯೆ ವೆಟ್ವೆಲ್ಳಿಂದ ಮಲಿನ ನೀರು ಶುದ್ದೀಕರಣ ಘಟಕದವರೆಗೂ ಡಿ.ಐ ಏರು ಕೊಳವೆ ಮಾರ್ಗವನ್ನು 2.40 ಕಿ.ಮಿ. ಅಳವಡಿಸುವುದು, ಹೊಸ ಬೈಪಾಸ್ ರಸ್ತೆಯ ಸಮೀಪ 5.00 ಎಂ.ಎಲ್.ಡಿ. ಸಾಮರ್ಥ್ಯದ ಎಸ್.ಬಿ.ಆರ್. ತಂತ್ರಜ್ಞಾನದ ಮಲಿನ ನೀರು ಶುದ್ಧಿಕರಣ ಘಟಕ ನಿರ್ಮಿಸುವುದು, 02 ಸಂಖ್ಯೆಯ ವೆಟ್ವೆಲ್ಗಳಲ್ಲಿ ಮಲಿನ ನೀರುವ ಶುದ್ದೀಕರಣ ಘಟಕಕ್ಕೆ ಪಂಪ್ ಮಾಡಲು ಯಂತ್ರೋಪಕರಣಗಳ ಅಳವಡಿಕೆ, ಮಲಿನ ನೀರು ಶುದ್ದೀಕರಣ ಘಟಕ ಹಾಗೂ 02 ಸಂಖ್ಯೆಯ ವೆಟ್ವೆಲ್ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ 11 ಕೆ.ವಿ. ವಿದ್ಯುತ್ ಮಾರ್ಗ ಅಳವಡಿಕೆ ಹಾಗೂ ಈ ಮಲಿನ ನೀರುವ ಶುದ್ದೀಕರಣ ಘಟಕವನ್ನು ನಿರಂತರವಾಗಿ ನಿಗಾವಹಿಸಲು ವಿನೂತನ ತಂತ್ರಜ್ಞಾನ ಬಳಕೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ 8.61 ಎಂ.ಎಲ್.ಡಿ. ಮಲಿನ ನೀರನ್ನು ವಿನೂತನ ತಂತ್ರಜ್ಞಾನದಡಿಯಲ್ಲಿ ಶುದ್ದೀಕರಿಸಿ ವೇದಾವತಿ ನದಿಗೆ ಬಿಡಲಾಗುತ್ತಿದ್ದು, ಸದರಿ ಸಾಮರ್ಥ್ಯದ ಬಳಸಿದ ನೀರು ನಿರ್ವಹಣಾ ಘಟಕ ನಿರ್ಮಿಸಲು 15.50 ಕೋಟಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ನೀಡಲಾಗಿರುತ್ತದೆ. ಸದರಿ ನೀರು ಮರುಬಳಕೆಗೆ ಯೋಗ್ಯವಾಗಿರುವುದರಿಂದ ಹತ್ತಿರದ ಕೈಗಾರಿಕಾ ಕಾರ್ಖಾನೆಗಳಿಗೆ ಮತ್ತು ಕೆರೆಗಳಿಗೆ ಮರು ಬಳಕೆಗೆ ಉಪಯೋಗಿಸಬಹುದಾಗಿರುತ್ತದೆ ಎಂದು ಸಭೆಯ ಗಮನಕ್ಕೆ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ಅವರು ತಂದರು.
ಸಚಿವ ಸುಧಾಕರ್ ಮಾತನಾಡಿ ಸದರಿ ಯೋಜನೆಯಡಿ ನೀರನ್ನು ವೇದಾವತಿ ನದಿಯಲ್ಲಿ ವ್ಯರ್ಥವಾಗಿ ಬಿಡುವ ಬದಲು ಹತ್ತಿರದ ಕೈಗಾರಿಕಾ ಪ್ರದೇಶಕ್ಕೆ ಮತ್ತು ಕೆರೆಗಳಿಗೆ ತುಂಬಿಸುವ ಮೂಲಕ ಮರುಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಮತ್ತು ಈ ಯೋಜನೆಯಡಿ 2ನೇ ಹಂತದ ಕಾಮಗಾರಿಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮತ್ತೊಮ್ಮೆ ಮರುಪರಿಶೀಲಿಸಿ ಯಾವುದಾದರೂ ಉಳಿತಾಯದ ಯೋಜನೆಯಡಿ ತಕ್ಷಣವೇ ಲಭ್ಯವಾಗುವ ಅನುದಾನ ಹಂಚಿಕೆ ಮಾಡಿಕೊಡಲು ಪ್ರಸ್ತಾವನೆ ನೀಡುವಂತೆ ಹಾಗೂ ಈ ಬಗ್ಗೆ ಮುಖ್ಯ ಮಂತ್ರಿಗಳಲ್ಲಿ ಹಾಗೂ ಸಂಬಂಧಿಸಿದ ಸಚಿವರಲ್ಲಿ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಸುಧಾಕರ್ ಸೂಚಿಸಿದರು.
ಸದರಿ ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಮುಖ್ಯ ಇಂಜಿನೀಯರ್ ಪ್ರವೀಣ್, ಕಾರ್ಯಪಾಲಕ ಇಂಜಿನಿಯರ್ ಮಲ್ಲೇಶ್ ನಾಯ್ಕ, ಸ.ಕಾ.ಇಂ. ಓದಾನಾಯ್ಕ್, ಹಿರಿಯೂರು ನಗರಸಭೆ ಪೌರಾಯುಕ್ತ ಎ.ವಾಸೀಂ ಹಾಜರಿದ್ದರು.

