ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ ೩೮೪ ದಿನಗಳ ಕಾಲ ರೈತರು ನಡೆಸಿದ ಚಳುವಳಿಗೆ ಮಣಿದು ಕಾಯಿದೆಗಳನ್ನು ವಾಪಸ್ ಪಡೆದ ಕೇಂದ್ರ ಸರ್ಕಾರ ಈಗ ಮತ್ತೆ ಮೂರು ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಲಿಖಿತವಾಗಿ ನೀಡಿದ ಭರವಸೆಯಂತೆ ನಡೆದುಕೊಳ್ಳದ ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ಚೌಕಟ್ಟು ನೀತಿ. ಸೀಡ್ ಆಕ್ಟ್, ವಿದ್ಯುಚ್ಚಕ್ತಿ ಕಾಯಿದೆ ಜಾರಿಗೆ ತರಲು ಮುಂದಾಗಿರುವುದು ಅನ್ನದಾತ ರೈತನಿಗೆ ಬಹುದೊಡ್ಡ ಪೆಟ್ಟು ನೀಡಲಿದೆ. ರಾಜ್ಯದಲ್ಲಿ ಈ ಕಾಯಿದೆಯನ್ನು ಜಾರಿಗೆ ತರಬಾರದು. ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮಾಡಿದ ನಂತರ ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿ ಇದುವರೆವಿಗೂ ವಾಪಸ್ ಪಡೆದಿಲ್ಲ. ಇದಕ್ಕಾಗಿ ನಮ್ಮ ಹೋರಾಟ ಎಂದು ಹೇಳಿದರು.
ಡಿ.೨೦, ೨೧ ರಂದು ಎನ್.ಡಿ.ಸುಂದರೇಶ್ರವರ ನೆನಪಿನ ದಿನ ಆಚರಿಸುತ್ತೇವೆ. ನೂರು ಯುವಕ-ಯುವತಿಯರಿಗೆ ಎರಡು ದಿನಗಳ ಕಾಲ ಎಂಟು ಗೋಷ್ಠಿಗಳನ್ನು ನಡೆಸುತ್ತೇವೆ. ಒಂದು ಸಾವಿರ ಯುವಕರಿಗೆ ಎರಡು ವರ್ಷಗಳ ಕಾಲ ಆರು ಶಿಬಿರ ಆಯೋಜಿಸಿ ವೈಚಾರಿಕ ಚಳುವಳಿಯ ಕುರಿತು ಪ್ರಜ್ಞೆ ಮೂಡಿಸುವುದು ನಮ್ಮ ಉದ್ದೇಶ.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಜನ್ಮದಿನಾಚರಣೆಯನ್ನು ಮೈಸೂರು ತಾಲ್ಲೂಕಿನ ಇಲವಾಲದಲ್ಲಿ ಆಚರಿಸಲಾಗುವುದು. ಇದೆ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಾಗುವುದೆಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ರೈತ ವಿರೋಧಿ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿಲ್ಲ. ಅದಕ್ಕಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸುತ್ತೇವೆ. ಪ್ರತಿ ಹಳ್ಳಿಗಳಲ್ಲಿಯೂ ನಮ್ಮ ಚಿಂತನೆಗಳನ್ನು ತಲುಪಿಸಿ ರೈತ ಸಮುದಾಯವನ್ನು ಮೇಲಕ್ಕೆತ್ತಲಾಗುವುದು.
ಕೋ-ಆಪರೇಟಿವ್ ಸೊಸೈಟಿಗಳ ಮೂಲಕ ರೈತರಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ರೈತರು ಬೆಳೆ ಬೆಳೆಯುವ ಪದ್ದತಿ ನೀರು ಬಳಕೆಯನ್ನು ಬದಲಾವಣೆ ಮಾಡಬೇಕಿದೆ. ಮಣ್ಣಿನ ಫಲವತ್ತತೆ, ಆಹಾರ ಸುರಕ್ಷತೆ ದೊಡ್ಡ ಸಮಸ್ಯೆಯಾಗಿರುವುದರಿಂದ ಹೆಚ್ಚಿನ ಒತ್ತು ಕೊಡಲಾಗುವುದೆಂದು ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷರುಗಳಾದ ಕೆ.ಪಿ.ಭೂತಯ್ಯ, ಶಿವಾನಂದ ಕುಗ್ವೆ, ಎ.ಎಲ್.ಕೆಂಪೆಗೌಡ, ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ
ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಹೊರಕೇರಪ್ಪ ಸೇರಿದಂತೆ ಅನೇಕ ರೈತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

