ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ತಮ್ಮ ಹಾಗು ತಮ್ಮ ಕುಟುಂಬ ಸದಸ್ಯರ ಮೇಲೆ ಹನಿ ಟ್ರ್ಯಾಪ್ ಪ್ರಯತ್ನಗಳು ನಡೆದಿವೆ ಎಂದು ಸದನದ ಒಳಗೆ ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ ನಂತರ ಈಗ ಮತ್ತೊಬ್ಬ ಕಾಂಗ್ರೆಸ್ ಸಚಿವ ತಮ್ಮ ಹೆಸರಿಗೆ ಮಸಿ ಬಳಿಯಲು ಸ್ವಪಕ್ಷದವರಿಂದಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ತಮ್ಮ ಮೇಲೆ ಬಂದಿರುವ ಭೂ ಕಬಳಿಕೆ ಆರೋಪಗಳಿಗೆ ಸ್ವಪಕ್ಷದವರೇ ಕಾರಣ ಎಂದು ಹೇಳುವ ಮೂಲಕ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೆ ಕನ್ನಡಿ ಹಿಡಿದಿದ್ದಾರೆ ಎಂದು ಅವರು ದೂರಿದ್ದಾರೆ.
ಇಷ್ಟಕ್ಕೂ ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ನಾಯಕರೇ ಈ ರೀತಿ ಟಾರ್ಗೆಟ್ ಆಗುತ್ತಿರುವುದು ಕಾಕತಾಳೀಯವೋ ಅಥವಾ ವ್ಯವಸ್ಥಿತ ಕುತಂತ್ರವೋ? ಈ ಷಡ್ಯಂತ್ರದ ಹಿಂದಿರುವ “ಮಹಾನಾಯಕ”ಯಾರು?
ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ನಮ್ಮ ಪಕ್ಷಕ್ಕೆ ಯಾವುದೇ ಆಸಕ್ತಿಯಿಲ್ಲ. ಆದರೆ ಆಡಳಿತ ಪಕ್ಷವು ಈ ರೀತಿ ಆಂತರಿಕ ಕಚ್ಚಾಟದಲ್ಲಿ ಮುಳುಗಿ ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವಾಗ ಅದರ ಬಗ್ಗೆ ದನಿ ಎತ್ತುವುದು ಜವಾಬ್ದಾರಿಯುತ ವಿಪಕ್ಷ ನಾಯಕನಾಗಿ ನನ್ನ ಜವಾಬ್ದಾರಿ. ಇದಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರು ಉತ್ತರ ನೀಡಬೇಕು ಎಂದು ಅಶೋಕ್ ಆರ್ ಆಗ್ರಹ ಮಾಡಿದ್ದಾರೆ.

