ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆಯೋಗ ಹಾಗೂ ಸೆಸ್ ಪ್ರಾಧಿಕಾರ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕಾರ್ಮಿಕ ಇಲಾಖೆ ಎದುರು ೧೨ ದಿನಗಳಿಂದಲೂ ಧರಣಿ ನಡೆಸುತ್ತಿರುವ ನೊಂದಾಯಿತ ಕಟ್ಟಡ ಕಾರ್ಮಿಕರು ಟೆಂಡರ್ ಪಡೆದ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಕಂಪನಿಗಳ ವಿರುದ್ದ ತನಿಖೆ ನಡೆಸುವಂತೆ ಕಾರ್ಮಿಕ ನಿರೀಕ್ಷಕರ ಮೂಲಕ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು.
ವಾಲ್ಮೀಕಿ ಅಭಿವೃದ್ದಿ ಮಂಡಳಿಯಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸಿದ ರೀತಿಯಲ್ಲಿಯೇ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಟೆಂಡರ್ ಪಡೆದಿರುವುದನ್ನು ತನಿಖೆ ನಡೆಸಬೇಕು. ಹೆಲ್ತ್ ಕೇರ್ ಚೆಕ್ಪ್ ಹೆಸರಿನಲ್ಲಿ ಇಪ್ಪತ್ತೈದು ಕೋಟಿ ೭೭ ಲಕ್ಷದ ಅರವತ್ತು ಸಾವಿರ ರೂ. ಖರ್ಚು ಮಾಡಿರುವುದರ ಹಿಂದೆ ಅಕ್ರಮವೆಸಗಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣ ನಿಜವಾದ ನೊಂದಾಯಿತ ಕಟ್ಟಡ ಕಾರ್ಮಿಕರ ಕಷ್ಟಕ್ಕೆ ಬಳಕೆಯಾಗುತ್ತಿಲ್ಲ ಎಂದು ಧರಣಿನಿರತರು ದೂರಿದರು.
ಅಂಬೇಡ್ಕ್ರ್ ಸೇವಾ ಕೇಂದ್ರದ ಮೂಲಕ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ನೀಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಧರಣಿನಿರತರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವೈ.ಕುಮಾರ್,
ಪ್ರಸನ್ನ, ಕೆ.ಗೌಸ್ಪೀರ್, ರಾಜಣ್ಣ, ಎಂ.ಆರ್.ನರಸಿಂಹಮೂರ್ತಿ, ಎಂ.ತಿಮ್ಮಯ್ಯ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

