ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಸಿಎಂ ಕುರ್ಚಿ ಕದನ ದಿನೇ ದಿನೇ ತಾರಕಕ್ಕೇರುತ್ತಿದೆ. ಕರ್ನಾಟಕ ಕಾಂಗ್ರೆಸ್ನ ಸಿಎಂ-ಡಿಸಿಎಂ ಬಣದ ನಾಯಕರು ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಕುರ್ಚಿ ಕದನ ಜೀವಂತವಾಗಿಟ್ಟಿದ್ದಾರೆ.
ನಾನೇ 5 ವರ್ಷ ಸಿಎಂ, ಎರಡೂವರೆ ವರ್ಷಕ್ಕೆ ನಾಯಕತ್ವ ಬದಲಾಗುತ್ತೆ ಅಂತ ಎಲ್ಲೂ ಒಪ್ಪಂದ ಆಗಿಲ್ಲ. ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ ಅಧಿವೇಶನದಲ್ಲೇ ಹೇಳಿಕೆ ಕೊಟ್ಟ ಬೆನ್ನಲ್ಲೇ ಸಿಎಂ ಆಪ್ತರ ಭೇಟಿಗೆ ಡಿಕೆಶಿ ಮುಂದಾಗಿದ್ದಾರೆ.
ಈ ನಡುವೆ ಸ್ಥಳೀಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಕ್ಷ್ಮ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ಇಲ್ಲಿನ ಸಮಸ್ಯೆಯನ್ನ ಇಲ್ಲೇ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರದ ಕುರಿತು ಭಾನುವಾರ ಕಲಬುರಗಿಯಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ಗೊಂದಲ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ಅಂತ ಹೇಳಿದರೆ ಹೇಗೆಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಯಾರೋ ಒಬ್ಬ ನಾಯಕನಿಂದ ಬೆಳಿದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷದ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಖರ್ಗೆ ಅವರು ಮಾರ್ಮಿಕವಾಗಿ ಹೇಳುವ ಮೂಲಕ ಸಿಎಂ-ಡಿಸಿಎಂ ಇಬ್ಬರಿಗೂ ಎಚ್ಚರಿಸಿದ್ದಾರೆ.

