ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಕ್ಕಳು ಮಾನಸಿಕವಾಗಿ ಸದೃಢವಾಗಲು ದೈಹಿಕ ಪರಿಶ್ರಮ ಅತ್ಯಗತ್ಯ ಎಂದು ಐಮಂಗಳ ಪೊಲೀಸ್ ನಿರೀಕ್ಷಕೆ ದೀಪಾ ಅವರು ಅಭಿಪ್ರಾಯಪಟ್ಟರು. ಹಿರಿಯೂರು ತಾ.ಗೊಲ್ಲಹಳ್ಳಿಯ ಜೆಟ್ ಸಿಬಿಎಸ್ಇ ಶಾಲೆಯಲ್ಲಿ ಕ್ರೀಡಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳು ಗೆದ್ದು ಬೀಗಬಾರದು ಸೋತು ಸೊರಗಬಾರದು ಗೆಲುವು ಮುನ್ನುಗ್ಗಲು ನೆರವಾಗಬೇಕು ಸೋಲು ಸವಾಲಾಗಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಹಿರಿಯೂರು ತಾ.ಸೊಂಡೆಕೆರೆ ಗ್ರಾಮದ ರಾಷ್ಟ್ರೀಯ ಖೋಖೋ ಪಟು ಕುಮಾರಿ ಪ್ರಕೃತಿ.ಎಸ್.ಎನ್ ಕ್ರೀಡಾ ಉತ್ಸವ ಉದ್ಘಾಟಿಸುವ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು.
ಹಳ್ಳಿ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ನನ್ನ ರಾಷ್ಟ್ರೀಯ ಭೂಮಿ ಸೊಂಡೆಕೆರೆ, ನರಸಿಂಹಣ್ಣನವರು ನನ್ನ ಮೊದಲ ಗುರು ಅಲ್ಲಿ ನಾನು ಖೋಖೋ ಕಲಿತು, ತೆಲಂಗಾಣ ಒಡಿಶಾ ರಾಜ್ಯಗಳಲ್ಲಿ ಸ್ಪರ್ಧೆಗಳನ್ನು ಎದುರಿಸಿ ಬಂದಿದ್ದೇನೆ, ನನ್ನಂತೆ ಎಲ್ಲಾ ಹಳ್ಳಿ ಮಕ್ಕಳು ಕ್ರೀಡೆಯಲ್ಲಿ ಮುನ್ನುಗ್ಗಿ ಯಶಸ್ಸು ಸಾಧಿಸಬೇಕೆಂದು ಮಕ್ಕಳಿಗೆ ವಿಶ್ವಾಸ ತುಂಬಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಗಿರಿಜಾ ಎನ್, ಪ್ರಾಂಶುಪಾಲ ಷಣ್ಮುಗ ಸುಂದರಂ ಹಾಗೂ ಶಿಕ್ಷಕ ವರ್ಗದ ಎಲ್ಲರೂ ಪಾಲ್ಗೊಂಡಿದ್ದರು. ಇಂದಿನಿಂದ ಮೂರು ದಿನಗಳ ಕಾಲ ಕ್ರೀಡಾ ಉತ್ಸವ ನಡೆಯಲಿದೆ.

