ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಗು ಅತ್ತರೆ ತಂದೆ – ತಾಯಿ, ಪೋಷಕರು ಸಮಾಧಾನ ಮಾಡಬೇಕು. ಇಲ್ಲಿ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದಿರುವ ಪತ್ರದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಏನು ಪತ್ರ ಬರೆದಿದ್ದಾರೆಂದು ಅವರನ್ನೇ ಕೇಳಬೇಕು. ಪಕ್ಷದ ವರಿಷ್ಠರನ್ನು ಭೇಟಿ ಮಾಡೋದು ಅವರವರ ಹಕ್ಕು. ಅವರ ಪ್ರತಿಪಾದನೆ, ಅವರ ವಿಚಾರ. ಅದರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ ಎಂದು ಸುರೇಶ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಗಮನಿಸುತ್ತಿರುತ್ತದೆ. ನಮ್ಮ ಪಕ್ಷದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಹಾಗಾಗಿಯೇ ಅವರು ಆ ಮಾತನ್ನು ಹೇಳಿದ್ದಾರೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರವಾಸ ಕುರಿತು ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರ ಭೇಟಿ ಆಗಲು ಹೋಗಿದ್ದಾರೆ. ಸಚಿವ ಪ್ರಿಯಾಂಕ್ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗ್ತಾರೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ಏನು ಹೇಳಿಕೆ ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತೇವೆ ಎಂದು ಸುರೇಶ್ ಸ್ಪಷ್ಟಪಡಿಸಿದರು.
ಹೆಚ್ ಡಿ ಕುಮಾರಸ್ವಾಮಿ ಕೇಂದ್ರದ ಮಂತ್ರಿಗಳು. ಇಲ್ಲಿ ಸಲಹೆ ಮಾಡುವ ಬದಲು ಮೋದಿಗೆ ಸಲಹೆ ಕೊಡಲಿ. ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ. ಕೇಂದ್ರದವರು ವೋಟ್ ತೆಗೆದಿದ್ದಾರೆ, ನೋಟು ತೆಗಿತಾರೆ. ಮೋದಿ ಅವರು ನಿರುದ್ಯೋಗದ ಬಗ್ಗೆ ಚರ್ಚೆ ಮಾಡಲ್ಲ. ಡಾಲರ್ ವಿರುದ್ಧ 56 ರೂಪಾಯಿ ಇದ್ದ ಬೆಲೆ ಈಗ 91ರೂ. ಆಗಿದೆ. ಜನರಿಗೆ ಇದರ ಪರಿಣಾಮದ ಬಗ್ಗೆ ಬಿಚ್ಚಿ ಹೇಳಬೇಕು ಎಂದು ಸುರೇಶ್ ತಿಳಿಸಿದರು.
ಕುಮಾರಸ್ವಾಮಿ ಅವರೇ ಕಾಂಗ್ರೆಸ್ ನವರ ಹುಳುಕು ಹೇಳಿ ಕಾಲ ಕಳೆಯಬೇಡಿ. ಗಾಂಧಿ, ನೆಹರು ಹೆಸರು ಎಲ್ಲಿದೆ ಎಂದು ಹುಡುಕುತ್ತಾರೆ. ಇವರ ಕಾಲದಲ್ಲಿ ಯಾವ ಹೆಸರು ಬೇಕೋ ಅದನ್ನು ಇಡುತ್ತಾರೆ. ದೇಶದ ಜನರಿಗೆ ಅರ್ಥವಾಗುವ ದಿನ ಹತ್ತಿರ ಬರುತ್ತಿದೆ ಎಂದು ಡಿ ಕೆ ಸುರೇಶ್ ಹೇಳಿದರು.

