ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಗೊರ್ಲಡಕು ಬಳಿ ಸಂಭವಿಸಿದ್ದ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶಿಗ್ಗಾವಿಯ ಮೊಹಮ್ಮದ್ ರಫೀಕ್ (35) ಚಿಕಿತ್ಸೆ ಫಲಿಸದೆ ಶುಕ್ರವಾರ ಹುಬ್ಬಳ್ಳಿಯ ಕೆಎಂಸಿಆರ್ಐನಲ್ಲಿ ಮೃತಪಟ್ಟಿದ್ದು ಸೇರಿ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಗುರುವಾರ 6 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದನ್ನು ಸ್ಮರಿಸಬಹುದಾಗಿದೆ.
ಗುರುವಾರ ಬೆಳಗಿನ ಜಾವ 1.45ರ ಸುಮಾರಿಗೆ ಕಂಟೈನರ್ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವೇಳೆ ಬಸ್ಸಿನ ಚಾಲಕ ಮೊಹಮ್ಮದ್ ರಫೀಕ್ ಗಾಯಗೊಂಡು, ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದು ಈ ಮೂಲಕ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಕ್ಲೀನರ್ ಸಾಧಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕರು ತಿಳಿಸಿದರು.
ಚಾಲಕನ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಮೃತ ಮೊಹಮ್ಮದ್ ರಫೀಕ್ ಸಹೋದರಿ ಕಣ್ಣೀರು ಹಾಕಿದ್ದು, ಮನೆಯ ಯಜಮಾನನನ್ನೇ ಕಳೆದುಕೊಂಡಿದ್ದೇವೆ. ನಮ್ಮ ಅಣ್ಣನೇ ನಮಗೆಲ್ಲ ಆಸರೆಯಾಗಿದ್ದ. ಕುಟುಂಬ ಮುನ್ನಡೆಸುತ್ತಿದ್ದ. ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಗುರುವಾರ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿ ಆಪರೇಷನ್ ಮಾಡುವವರೆಗೂ ಮಾತನಾಡುತ್ತಾ ಇದ್ದರು.
ರಾತ್ರಿ 12:30ಕ್ಕೆ ಆಪರೇಷನ್ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಆದರೆ ಶುಕ್ರವಾರ ಬೆಳಗ್ಗೆ 6 ಗಂಟೆಗೆ ನಮ್ಮ ಅಣ್ಣ ಸಾವನ್ನಪ್ಪಿದ್ದಾರೆ ಎಂದು ಕಣ್ಣೀರು ಹಾಕಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಚಾಲಕ: ಬಸ್ ಅಪಘಾತದ ಘಟನೆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ ಮೊಹಮ್ಮದ್ ರಫೀಕ್ರನ್ನು ಮಾಧ್ಯಮದವರು ಮಾತನಾಡಿಸಿದಾಗ, ಲಾರಿಯು ಬಸ್ನ ಡಿಸೇಲ್ ಟ್ಯಾಂಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ನಮ್ಮ ಬಸ್ನಲ್ಲಿ ಇಬ್ಬರು ಮಕ್ಕಳಿದ್ದರು. ಶಿವಮೊಗ್ಗ, ಕುಮಟಾ ಮೂಲಕ ಗೋಕರ್ಣಕ್ಕೆ ತೆರಳುತ್ತಿದ್ದೆವು. ದಾರಿ ಮಧ್ಯೆ, ಊಟ ಮುಗಿಸಿ ಪ್ರಯಾಣ ಮುಂದುವರೆಸಿದ್ದೆವು. ಆಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದರು.
ಡಿಎನ್ಎ ಪರೀಕ್ಷೆ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಸ್ ದುರಂತ ಪ್ರಕರಣದಲ್ಲಿ ಮೃತರ ಡಿಎನ್ಎ ಪರೀಕ್ಷೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಮೃತ ದೇಹದ ಮೂಳೆಗಳ ಸ್ಯಾಂಪಲ್ಸ್ ಹುಬ್ಬಳ್ಳಿಗೆ ರವಾನೆ ಮಾಡಿದ್ದು, ಹುಬ್ಬಳ್ಳಿಯ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಲಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಯ ವರದಿ ಆಧಾರದ ಮೇಲೆಮೃತರ ಗುರುತು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.
ಬಾಲ್ಯದ ಗೆಳೆಯರ ದುರಂತ ಸಾವು-
ನೂರಾರು ಕನಸುಗಳೊಂದಿಗೆ ಮುಂದಿನ ತಿಂಗಳು ಹಸೆ ಮಣೆಯೇರಬೇಕಿದ್ದ ಇಬ್ಬರು ಜೀವದ ಗೆಳತಿಯರು ಹಿರಿಯೂರು ಬಸ್ ಅಪಘಾತದಲ್ಲಿ ಮಸಣ ಸೇರಿದ್ದು ಮಾತ್ರ ದುರಂತ.
ಮಾನಸ ಮತ್ತು ನವ್ಯಾ ಜೀವದ ಗೆಳತಿಯರು. ಒಟ್ಟಿಗೆ ಬೆಳೆದವರು, ಒಟ್ಟಿಗೆ ಇಂಜಿನಿಯರ್ ಮತ್ತು ಎಂ.ಟೆಕ್ ಮಾಡಿ ಒಂದೇ ಕಂಪನಿಯಲ್ಲಿ ಇಬ್ಬರು ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಸಜೀವ ದಹನ:
ಜೀವದ ಗೆಳತಿಯರಾದ ಮಾನಸ ಮತ್ತು ನವ್ಯಾ ಕ್ರಿಸ್ಮಸ್ ರಜೆಯ ಕಾರಣ ದೇವರ ದರ್ಶನಕ್ಕಾಗಿ ಬೆಂಗಳೂರಿನಿಂದ ಸಿಗಂದೂರು ಮತ್ತು ಗೋಕರ್ಣ ದೇವಾಲಯಕ್ಕೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಿತ್ತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸಂಭವಿಸಿದ ಕಂಟೈನರ್ ಲಾರಿ ಮತ್ತು ಬಸ್ ಅಪಘಾತದಲ್ಲಿ ಲಾರಿ ಚಾಲಕ ಸೇರಿ 7 ಮಂದಿ ಸಜೀವ ದಹನವಾದರು. ಬಾಲ್ಯ ಸ್ನೇಹಿತೆಯರು: ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದ 26 ವರ್ಷದ ಮಾನಸ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿಯ ನವ್ಯಾ ಮಂಜುನಾಥ್ ಬಾಲ್ಯ ಸ್ನೇಹಿತೆಯರು.
ನವ್ಯಾ ಕುಟುಂಬ ಕಳೆದ 30 ವರ್ಷಗಳಿಂದ ಚನ್ನರಾಯಪಟ್ಟಣದಲ್ಲಿ ವಾಸವಾಗಿದೆ. ಬಾಲ್ಯ ಸ್ನೇಹಿತೆಯರಾದ ಇವರು ನಗರದ ಪೂರ್ಣಚಂದ್ರ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿಯ ತನಕ ವ್ಯಾಸಂಗ ಮಾಡಿ, ನಂತರ ಹಾಸನದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಎಂ.ಟೆಕ್ ಓದಿ ಸಾಫ್ಟ್ವೇರ್ ಇಂಜಿನಿಯರ್ಆಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಯಮರಾಯನ ಸೆಳೆತ: ಬೆಂಗಳೂರಿನಿಂದ ಬುಧವಾರ ರಾತ್ರಿ ಸ್ನೇಹಿತೆ ಮಿಲನಾ ಜೊತೆ ಇಬ್ಬರೂ ಬಸ್ ಹತ್ತಿ ಹೊರಟಿದ್ದರು. ಮಿಲನಾ ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡಿಯುತ್ತಿದ್ದಾರೆ. ಆದರೆ ಮಾನಸ ಮತ್ತು ನವ್ಯಾ ಸಜೀವ ದಹನವಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಹಸಮಣೆ ಏರಬೇಕಾದವರು ಸೇರಿದ್ದು ಮಸಣಕ್ಕೆ:
1ನೇ ತರಗತಿಯಿಂದ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿ ಎಂ.ಟೆಕ್ ತನಕ ಒಟ್ಟಿಗೆ ಓದಿದ್ದ ನವ್ಯಾ ಮತ್ತು ಮಾನಸ ಇಬ್ಬರಿಗೂ ಒಂದೇ ದಿನ ಜ.25ಕ್ಕೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಇನ್ನು ಮಾನಸ ಕೂಡಾ ಪಕ್ಕದ ಮನೆಯವರನ್ನೇ ಪ್ರೀತಿಸಿದ್ದು, ಕುಟುಂಬಸ್ಥರು ಇಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ವಿಧಿಯಾಟವೇ ಬೇರೆಯಿತ್ತು. ಮದುವೆಯಾದ ಮೇಲೆ ಇಬ್ಬರು ಒಟ್ಟಿಗೆ ಸೇರುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಮದುವೆಗೂ ಮುನ್ನ ದೇವರ ದರ್ಶನ ಮಾಡೋಣ ಎಂದುಕೊಂಡು ಬೆಂಗಳೂರಿನಿಂದ ರಾತ್ರಿ ಮೂರು ಮಂದಿ ಸ್ನೇಹಿತೆಯರು ಬಸ್ ಹತ್ತಿದ್ದರು. ನಿದ್ದೆ ಮಂಪರಿನಲ್ಲಿದ್ದವರು ಕೊನೆಗೆ ಶಾಶ್ವತವಾಗಿ ನಿದ್ರೆಗೆ ಜಾರಿದ್ದು ದುರಂತವೇ ಸರಿ.
ಜನವರಿಯಲ್ಲಿ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು. ಏಪ್ರಿಲ್ನಲ್ಲಿ ಮದುವೆ ಮಾಡೋದಂತಿತ್ತು. ಕ್ರಿಸ್ಮಸ್ ರಜೆ ಹಿನ್ನೆಲೆ ಮದುವೆಗೆ ಮೊದಲು ದೇವಸ್ಥಾನಕ್ಕೆ ಹೋಗಿ ಬರುವ ಅಂತ ಗೆಳತಿಯರ ಜೊತೆ ಹೊರಟಿದ್ದಳು. ಅಷ್ಟರಲ್ಲಿ ಹೀಗಾಗಿದೆ ಅಂತ ಬೆಳಗ್ಗಿನ ಜಾವ ನಮಗೆ ಗೊತ್ತಾಗಿದೆ. ಅಮ್ಮನಿಗೆ ವಿಷಯ ಹೇಳದೆ, ಅಪಘಾತ ಆಗಿದೆ. ಮಿಸ್ ಆಗಿದ್ದಾಳೆ ಅಂತಷ್ಟೇ ಹೇಳಿದ್ದೆವು. ಅಷ್ಟಕ್ಕೆ ಅವಳು ಮೂರ್ಛೆ ತಪ್ಪಿ ಬಿದ್ದಳು ಎಂದು ನವ್ಯಾ ಸಹೋದರ ನಾಗೇಶ್ ಹೇಳಿದರು. ಅವರ ಅಪ್ಪ ಅಮ್ಮ ತುಂಬಾನೆ ಕಷ್ಟಪಟ್ಟು ಬೆಳೆಸಿದ್ದರು.
ಈಗ ಬೆಂಗಳೂರಲ್ಲಿ ಕೆಲಸ ಸಿಕ್ಕಿತ್ತು. ಇಲ್ಲಿ ಸುತ್ತಮುತ್ತ ಇರುವ ಮಕ್ಕಳಿಗೆಲ್ಲ ಬುದ್ಧಿ ಹೇಳುತ್ತಿದ್ದಳು. ಅಂತಹ ಹುಡುಗಿಗೆ ಹೀಗಾಗಿರುವುದು ನಮಗೆ ತುಂಬಾ ಬೇಜಾರಾಗಿದೆ. ಊಟ ಕೂಡ ಸೇರ್ತಿಲ್ಲ ಎಂದು ಸ್ಥಳೀಯರಾದ ಶಕುಂತಲಾ ನೋವು ಹಂಚಿಕೊಂಡರು.

