ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಧೀಮಂತ ನಾಯಕ, ಸರಳ ಸಜ್ಜನಿಕೆಯ ರಾಜಕಾರಣಿ, ಶಿಕ್ಷಣ ತಪಸ್ವಿ, ಹೃದಯ ಸಿರಿವಂತ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾವಪೂರ್ಣ ನಮನಗಳನ್ನು ತಿಳಿಸಿದ್ದಾರೆ.
ದಾವಣಗೆರೆಯ ವಿಕಾಸದ ಹರಿಕಾರ, ಮಾಜಿ ಸಚಿವರು ಹಾಗೂ ಶಾಸಕರೂ ಆಗಿದ್ದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪನವರ ಕೈಲಾಸ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ, ಪಂಚಪೀಠಗಳ ಜಗದ್ಗುರುಗಳು, ನಾಡಿನ ಅನೇಕ ಮಠಾಧೀಶರು, ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಹಲವಾರು ನಾಯಕರೊಂದಿಗೆ ಭಾಗವಹಿಸಿದ್ದರು.
ಆರು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಅಪ್ರತಿಮ ಜನನಾಯಕರಾಗಿ ಹಾಗೂ ಕಾಂಗ್ರೆಸ್ ಪಕ್ಷದ ಭದ್ರ ಶಕ್ತಿಯಾಗಿ ಜನಮನದಲ್ಲಿ ನೆಲೆಸಿದ್ದಾರೆ. ಅವರ ಸರಳ ಸಜ್ಜನಿಕೆಯ ರಾಜಕಾರಣ ಹಾಗೂ ವಿಶಾಲ ಹೃದಯವಂತಿಕೆ ನಮಗೆಲ್ಲರಿಗೂ ಸದಾ ಮಾದರಿ ಎಂದು ಶಿವಕುಮಾರ್ ತಿಳಿಸಿದರು.
ಮಧ್ಯ ಕರ್ನಾಟಕದ ಹೃದಯಭಾಗದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಇವರು, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಸಾಮಾನ್ಯ ಜನರಿಗೂ ತಲುಪಿಸುವ ಮೂಲಕ ಸಾವಿರಾರು ಕುಟುಂಬಗಳ ಬಾಳಿಗೆ ಬೆಳಕಾದವರು. ಸಮಾಜಮುಖಿ ಚಿಂತನೆಯ ಈ ಮಹಾಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಡಿಸಿಎಂ ಶಿವಕುಮಾರ್ ಅವರು ಪ್ರಾರ್ಥಿಸಿದರು.
ದಾವಣಗೆರೆಯ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ದಿವಂಗತ ಶಾಮನೂರು ಶಿವಶಂಕರಪ್ಪನವರ ಸ್ಮೃತಿ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ಶಿವಶಂಕರಪ್ಪನವರು ತಮ್ಮ ಜನಪರ ಕಾರ್ಯಗಳು ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ನಮ್ಮ ನಡುವೆ ಸದಾಕಾಲ ಜೀವಂತವಿರಲಿದ್ದಾರೆ. ಅಗಲಿದ ಮಹಾಚೇತನಕ್ಕೆ ನಮನಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ತೆರಳಿ ಅಗಲಿದ ಚೇತನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಭಾವಪೂರ್ಣ ನಮನ ಸಲ್ಲಿಸಿದರು.
ಈ ವೇಳೆ ನಾಡಿನ ವಿವಿಧ ಮಠದ ಶ್ರೀ ಗಳ ಆಶೀರ್ವಾದ ಪಡೆಯಲಾಯಿತು. ದಾವಣಗೆರೆ ನಗರದಲ್ಲಿ ನಡೆದ ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಲೋಕಸಭಾ ಸದಸ್ಯ ಬಿ. ಎನ್.ಚಂದ್ರಪ್ಪ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

