ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ತೆರೆವುಗೊಳಿಸಿದರೆ ಕಾಂಗ್ರೆಸ್‘ನ ಕೆ.ಸಿ ವೇಣುಗೋಪಾಲ್ ಅವರಿಗೆ ಏನು ಸಮಸ್ಯೆ? ನಿಮಗೇಕೆ ಬೆಂಕಿ ಬಿದ್ದಿದೆ ? ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಕಲೆಕ್ಷನ್ ಏಜೆಂಟ್ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಒಂದು ಸಮುದಾಯದ ಓಲೈಕೆಗಾಗಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಜೆಡಿಎಸ್ ಟೀಕಿಸಿದೆ.
ಈಗಾಗಲೇ ಕುರ್ಚಿ ಕಚ್ವಾಟದಿಂದ ಕರ್ನಾಟಕದ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ರಾಜಕಾರಣ ಮತ್ತು ರಾಜ್ಯದ ವಿಚಾರಗಳ ಬಗ್ಗೆ ನಿರಂತರ ಹಸ್ತಕ್ಷೇಪ ಮಾಡುವುದು ಎಷ್ಟು ಸರಿ ? ಸರ್ಕಾರದ ತೀರ್ಮಾನಗಳ ಕುರಿತು ಪದೇ ಪದೇ ಮೂಗು ತೋರಿಸುತ್ತಿರುವುದನ್ನು ಗಮನಿಸಿದರೆ, ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ ಅಥವಾ ದುರ್ಬಲರಾಗಿದ್ದಾರೆ ಎಂಬುದು ಸ್ಪಷ್ಟ ಎಂದು ಜೆಡಿಎಸ್ ಟೀಕಿಸಿದೆ.
ಸಿದ್ದರಾಮಯ್ಯ ಡಮ್ಮಿ ಸಿಎಂ ಆದರೆ, ವೇಣುಗೋಪಾಲ್ ಸೂಪರ್ ಸಿಎಂ ಆಗಿರುವಂತಿದೆ. ಅವರ ಆದೇಶಗಳನ್ನು ಸಿದ್ದರಾಮಯ್ಯ ಪಾಲಿಸುತ್ತಿರುವುದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ ರಾಜ್ಯದ ಜನತೆಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ನಡೆಸಿಕೊಳ್ಳುತ್ತಿರುವುದು ರಾಜ್ಯದ ದುರಂತ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

