ಝಡ್ ಶ್ರೇಣಿ ಭದ್ರತೆ ಕೋರಿ ಪತ್ರ ಬರೆದ ಶಾಸಕ ಜನಾರ್ದನ್​ ರೆಡ್ಡಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಗೂಂಡಾ ಸಹಚರರಿಂದ ಜೀವ ಬೆದರಿಕೆ ಇದ್ದು ಕೂಡಲೇ ನನಗೆ ತುರ್ತು
ಝಡ್ಶ್ರೇಣಿಯ ಭದ್ರತೆ ಒದಗಿಸುವಂತೆ ಕೋರಿ ಶಾಸಕ ಗಾಲಿ ಜನಾರ್ದನ್​ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಗೃಹ ಸಚಿವ ಪರಮೇಶ್ವರ್​, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪೆಟ್ರೋಲ್ ಬಾಂಬ್ ಹಾಗೂ ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿರುವ ಹಿನ್ನೆಲೆಯಲ್ಲಿ ಅತ್ಯಂತ ಆಘಾತ ಮತ್ತು ಆಕ್ರೋಶದೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

- Advertisement - 

ದಿನಾಂಕ-1-01-2026 ರಂದು, ಹೊಸ ವರ್ಷದ ದಿನದಂದೇ ಬಳ್ಳಾರಿಯಲ್ಲಿನ ನನ್ನ ನಿವಾಸದ ಮೇಲೆ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ಬದಲಾಗಿ, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಗೂಂಡಾ ಪಡೆಯು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ ಹತ್ಯೆಯ ಸಂಚು ಇದಾಗಿದೆ ಎಂದು ಜನಾರ್ದನ್​ ರೆಡ್ಡಿ ದೂರಿದ್ದಾರೆ.

ಶಾಸಕ ನಾರಾ ಭರತ್ ರೆಡ್ಡಿಯವರ ಗೂಂಡಾ ಬೆಂಬಲಿಗರು ಕಳೆದ ಜ.1ರ ಮಧ್ಯಾಹ್ನ 2 ಗಂಟೆಗೆ ನನ್ನ ಮನೆಯ ಫೆನ್ಶಿಂಗ್​ ಆವರಣದಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಲು ಯತ್ನಿಸಿದರು.

- Advertisement - 

ನಮ್ಮ ನಿವಾಸದ ಸಿಬ್ಬಂದಿ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು. ಸಂಜೆ 5:30 ಗಂಟೆಗೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ನಾರಾ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿ, 40-50 ಗೂಂಡಾಗಳೊಂದಿಗೆ ಬಿಯರ್ ಬಾಟಲ್, ಕಲ್ಲು ಮತ್ತು ಮಾರಕಾಸ್ತ್ರಗಳನ್ನು ಹಿಡಿದು ನನ್ನ ಮನೆ ಆವರಣದೊಳಗೆ ಅಕ್ರಮವಾಗಿ ನುಗ್ಗಿ ಕುರ್ಚಿ ಹಾಕಿ ಕುಳಿತು ಯಾರು ಬರುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದರು.

ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೂ ಅವರು ಮೂಕ ಪ್ರೇಕ್ಷಕರಾಗಿದ್ದರು. ನಮ್ಮ ಕಾರ್ಯಕರ್ತರೊಬ್ಬರು ಪ್ರಶ್ನಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ, ಜನಾರ್ದನ ರೆಡ್ಡಿ ಮನೆಯಲ್ಲಿದ್ದರೆ ಹೊರಗೆ ಬರಲು ಹೇಳು, ಇಂದು ಅವನ ಕಥೆ ಮುಗಿಸುತ್ತೇನೆ ಎಂದು ಅಸಭ್ಯ ಭಾಷೆ ಬಳಸಿ ಬೆದರಿಕೆ ಹಾಕಿದರು ಎಂದು ಜನಾರ್ದನರೆಡ್ಡಿ ಅವರು ಆರೋಪಿಸಿದರು.
ಗಂಗಾವತಿಯಿಂದ ನಾನು ರಾತ್ರಿ 7 ಗಂಟೆಗೆ ಬಳ್ಳಾರಿಯ ಮನೆಗೆ ತಲುಪಿದ ತಕ್ಷಣ
, ಶಾಸಕ ನಾರಾ ಭರತ್ ರೆಡ್ಡಿಯವರ ಸೂಚನೆ ಮೇರೆಗೆ ಸತೀಶ್ ರೆಡ್ಡಿ ಮತ್ತು ಅವರ ಗೂಂಡಾ ಪಡೆ ದಾಳಿ ಆರಂಭಿಸಿತು.

ಈ ವೇಳೆ ಸತೀಶ್ ರೆಡ್ಡಿಯ ಖಾಸಗಿ ಗನ್​ಮ್ಯಾನ್​ಗಳು ನೇರವಾಗಿ ನನ್ನನ್ನೇ ಗುರಿಯಾಗಿಸಿಕೊಂಡು ಹಾಗೂ ನನ್ನ ಮನೆಯ ಮೇಲೆ ಸುಮಾರು 8 ಸುತ್ತು ಗುಂಡು ಹಾರಿಸಿದರು. ಆದರೆ ದೇವರ ದಯೆ ಹಾಗೂ ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾಗಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಿಫಲರಾದರು ಎಂದು ಗಂಗಾವತಿ ಶಾಸಕ ಜನಾರ್ದನ್​ ರೆಡ್ಡಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ವತಃ ಶಾಸಕ ನಾರಾ ಭರತ್ ರೆಡ್ಡಿ ಅಂದು ರಾತ್ರಿ 9:00 ಗಂಟೆಗೆ ಎಸ್.ಪಿ ಸರ್ಕಲ್ ಬಳಿ ನೂರಾರು ಗೂಂಡಾಗಳೊಂದಿಗೆ ದೊಣ್ಣೆ, ಕಲ್ಲುಗಳಲ್ಲದೆ ಪೆಟ್ರೋಲ್ ಬಾಂಬ್ ಗಳನ್ನು ಹಿಡಿದು ನನ್ನ ಮನೆಯ ಮೇಲೆ ದಾಳಿ ಮಾಡಲು ಬಂದರು. ಈ ದಾಳಿಯ ಸಂದರ್ಭದಲ್ಲಿ ಸತೀಶ್ ರೆಡ್ಡಿ, ಖಾಸಗಿ ಗನ್ ಮ್ಯಾನ್ ಗಳು ನನ್ನ ಮನೆ ಮತ್ತು ಕಚೇರಿಯ ಮೇಲೆ ಮನಬಂದಂತೆ ಗುಂಡು ಹಾರಿಸಿದರು.

ಇದರ ಪರಿಣಾಮ, ದುರದೃಷ್ಟವಶಾತ್ ಓರ್ವ ಅಮಾಯಕ ವ್ಯಕ್ತಿಗೆ ಗುಂಡು ತಗುಲಿ, ಸಾವನ್ನಪ್ಪಿರುತ್ತಾರೆ. ನಂತರ ಪೊಲೀಸರು ಟಿಯರ್ ಗ್ಯಾಸ್ ಬಳಸಿ, ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು ಎಂದು ಜನಾರ್ದನರೆಡ್ಡಿ ಅವರು ವಿವರಿಸಿದ್ದಾರೆ.

ಪೆಟ್ರೋಲ್ ಬಾಂಬ್ ಮತ್ತು ಬಂದೂಕುಗಳೊಂದಿಗೆ ಒಬ್ಬ ಹಾಲಿ ಶಾಸಕನ ಮನೆಗೆ ಬಂದು ಪೊಲೀಸರ ಎದುರೇ ಗಂಟೆಗಟ್ಟಲೆ ದಾಂಧಲೆ ನಡೆಸಿ, ಸಾವಿರಾರು ಜನರ ಎದುರುಗಡೆಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸುವುದು ರಾಜ್ಯದಲ್ಲಿ ಜಂಗಲ್ ರಾಜ್ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ನನ್ನ ಪ್ರಾಣಕ್ಕೆ ಇರುವ ಅಪಾಯ ಈಗ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ವಿರೋಧಿಗಳು ಎಂತಹ ಕೃತ್ಯಕ್ಕೂ ಹೇಸುವುದಿಲ್ಲ ಎಂಬುದು ಸಾಬೀತಾಗಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಇಂಥ ದಾಳಿ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ತಕ್ಷಣದಿಂದ ಜಾರಿಗೆ ಬರುವಂತೆ ಝಡ್ ಅಥವಾ ತತ್ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಮತ್ತು ಪೆಟ್ರೋಲ್ ಬಾಂಬ್ ಬಳಸಿದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.

ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನನಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿ, ಮುಂದಿನ ದಿನಗಳಲ್ಲಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಈ ಮೂಲಕ ಎಚ್ಚರಿಸಲು ಬಯಸುತ್ತೇನೆ ಎಂದು ಶಾಸಕ ಜನಾರ್ದನರೆಡ್ಡಿ ತಿಳಿಸಿದ್ದಾರೆ.

 

 

Share This Article
error: Content is protected !!
";