ಮಾಚಿದೇವ ಮಡಿವಾಳ ಸಂಘದ ತಾಲೂಕು ಅಧ್ಯಕ್ಷರಾಗಿ ರಂಗಸ್ವಾಮಿ ಆಯ್ಕೆ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾಚಿದೇವ ಮಡಿವಾಳ ಸಂಘದ ತಾಲೂಕು ಅಧ್ಯಕ್ಷರಾಗಿ ಜಿ. ರಂಗಸ್ವಾಮಿ ನೂತನವಾಗಿ ಆಯ್ಕೆಯಾಗಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ತಾಲೂಕು ಮಾಚಿದೇವ ಮಡಿವಾಳ ಸಂಘದ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಂಗಸ್ವಾಮಿ ಮಾತನಾಡಿ ನಾನು 2011ರಿಂದ ತಾಲೂಕು ಮಾಚಿದೇವ ಮಡಿವಾಳ ಸಂಘಕ್ಕೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಸನ್ನಿವೇಶದಲ್ಲಿ ತಾಲೂಕಿನ ಸಮುದಾಯದ ಹಿರಿಯರ ಆದೇಶದಂತೆ ಅಧ್ಯಕ್ಷನಾಗಿ ಪುನರಾಯ್ಕೆಯಾಗಿದ್ದೇನೆ. ಸುಮಾರು ವರ್ಷಗಳ ಕಾಲ ಅಧ್ಯಕ್ಷನಾಗಿ ಸಮುದಾಯದ ಹಿತಕ್ಕಾಗಿ ದುಡಿದಿದ್ದೇನೆ. ನನ್ನ ಪ್ರಾಮಾಣಿಕ ಕೆಲಸವನ್ನು ಪರಿಗಣಿಸಿ ಸಮುದಾಯದ ಬಂದುಗಳು ನನ್ನನ್ನು ಪುನರಾಯ್ಕೆ ಮಾಡಿದ್ದಾರೆ.ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ. ಅವರ ಗೌರವಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುತ್ತೇನೆ.

ಹಿಂದಿನ ನನ್ನ ಸೇವಾವಧಿಯಲ್ಲಿ ಪಕ್ಷಾತೀತವಾಗಿ ಜಾತ್ಯತೀತವಾಗಿ, ತಾಲೂಕಿನ ಹಲವಾರು ಜನಪರ ಸಂಘಟನೆಗಳ ಜೊತೆ ಕೆಲಸ ಮಾಡಿ ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಮುಂಬರುವ ದಿನಗಳಲ್ಲಿ ಮಡಿವಾಳ ಸಮುದಾಯದ ಎಲ್ಲ ಬಂದುಗಳ ಹಿತದೃಷ್ಟಿಯಿಂದ ಸಮುದಾಯ ಭವನ, ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಇದೆಲ್ಲದರ ಜೊತೆಗೆ ಮಡಿವಾಳ ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾದ ಅರ್ಹ ಸವಲತ್ತುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ರಂಗಸ್ವಾಮಿ,

- Advertisement - 

ಕಳೆದ ಕೆಲವು ದಿನಗಳಿಂದ ನನ್ನ ಮೇಲೆ ಸಮಾಜದ ಕೆಲವರು ಅಪ ಪ್ರಚಾರ ಮಾಡಿದ್ದರು. ನನ್ನ ಸಾರ್ವಜನಿಕ ಜೀವನದಲ್ಲಾಗಲಿ, ಸಮುದಾಯದ ವಿಚಾರಗಳಲ್ಲಾಗಲಿ ಎಂದೂ ಕೂಡಾ ಅಪಚಾರ ವಾಗದಂತೆ ನಡೆದುಕೊಂಡು ಬಂದಿದ್ದೇನೆ. ಒಂದು ವೇಳೆ ನಾನೇನಾದರೂ ಸಮುದಾಯಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದರೆ ಸಮಾಜದ ಹಿರಿಯರು ಕೊಡುವ ಶಿಕ್ಷೆಗೆ ಬದ್ಧನಾಗಿದ್ದೇನೆ.

ನನ್ನ ಸಮುದಾಯದ ಜವಾಬ್ದಾರಿ ಹೊತ್ತ ಮೇಲೆ ಸಮಾಜದವರು ಕೊಟ್ಟ ಪ್ರತಿಯೊಂದು ಪೈಸೆಯನ್ನು ಲೆಕ್ಕ ಇಟ್ಟಿದ್ದೇನೆ. ಅಪ ಪ್ರಚಾರ ಮಾಡುವವರು ಬಂದು ಮುಕ್ತವಾಗಿ ಪರಿಶೀಲಿಸಬಹುದು. ನನ್ನ ಸಮುದಾಯದ ಬಡವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕೆನ್ನುವ ಗುರಿ ನನ್ನದು ಇದಕ್ಕಾಗಿ ಅಹರ್ನಿಷಿ ದುಡಿಯಲು ಸಿದ್ದನಿದ್ದೇನೆ. ಇದಕ್ಕಾಗಿ ತಾಲೂಕಿನ ಎಲ್ಲ ಪದಾಧಿಕಾರಿಗಳು ಹಾಗೂ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಂತೆ ಮಡಿವಾಳ ಸಮುದಾಯವನ್ನು ತಾಲೂಕಿನಲ್ಲಿ ಸಂಘಟಿಸಲು ಬದ್ಧನಾಗಿದ್ದೇನೆ ಎಂದು ರಂಗಸ್ವಾಮಿ ಹೇಳಿದರು.

- Advertisement - 

ಶ್ರೀ ಮಾಚಿದೇವ ಮಡಿವಾಳ ಸಂಘದ ತಾಲೂಕಿನ ನೂತನ ಪದಾಧಿಕಾರಿಗಳು- ಗೌರವಾಧ್ಯಕ್ಷ ಮುತ್ತರಾಯಪ್ಪ, ಅಧ್ಯಕ್ಷ ಜಿ. ರಂಗಸ್ವಾಮಿ, ಉಪಾಧ್ಯಕ್ಷರಾದ ಪಿ. ನಂಜಪ್ಪ, ರಾಜೇಶ್ವರಿ, ಕಾರ್ಯಾಧ್ಯಕ್ಷ ಸಿ ಆನಂದ್ ಕುಮಾರ್, ಪ್ರದಾನ ಕಾರ್ಯದರ್ಶಿ ಪಿ. ಚಂದ್ರ, ಸಹ ಕಾರ್ಯದರ್ಶಿ ಡಿ. ಎನ್. ಬಾಬು, ಖಜಾಂಚಿ ಮುನಿರಾಜು, ನಿರ್ದೇಶಕರಾದ ನರಸಿಂಹ ಮೂರ್ತಿ, ಬಿ. ಶಿವಮೂರ್ತಿ, ಚನ್ನಕೇಶವ ಮೂರ್ತಿ, ಅಂಜಿನಪ್ಪ, ಎಂ. ಮುನಿಯಪ್ಪ, ಕೆ. ವಿ. ಪ್ರಕಾಶ್, ಮಹಿಳಾ ನಿರ್ದೇಶಕರು ತಿಪ್ಪಕ್ಕ, ಲಕ್ಷ್ಮಮ್ಮ ಮುಂತಾದವರು ಆಯ್ಕೆಯಾಗಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಮಾಚಿದೇವ ಮಡಿವಾಳ ಸಂಘದ ಖಜಾಂಚಿ ಮಂಜುನಾಥ್, ಕೃಷ್ಣಪ್ಪ, ಪಿ. ನಾಗರಾಜ್, ರಾಜ್ಯ ನಿರ್ದೇಶಕರಾದ ರಾಜೇಶ್ವರಿ ಸೇರಿದಂತೆ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು.

 

 

Share This Article
error: Content is protected !!
";