ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಡಿಸಿಎಂ ನಡುವೆ ಕುರ್ಚಿ ಗಲಾಟೆ ವಿಧಾನಸೌಧದಲ್ಲಿ ಬ್ರೋಕರ್ ಗಳ ಭರಾಟೆ ಜೋರಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಎಂದು ಬೀಗುತ್ತಾ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದಾರೆ. ಇನ್ನೊಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಕನಸು ಈಡೇರದೇ ಹತಾಶರಾಗಿದ್ದಾರೆ.
ಈ ಕುರ್ಚಿ ಕಿತ್ತಾಟದ ನಡುವೆ ಗೊಂದಲದಲ್ಲಿರುವ ಸಚಿವರು ಗುರುವಾರದ ಸಂಪುಟ ಸಭೆ ಬಿಟ್ಟರೆ ಇನ್ನೂ ವಾರ ಪೂರ್ತಿ ವಿಧಾನಸೌಧದ ಕಡೆ ತಲೆ ಹಾಕುತ್ತಿಲ್ಲ. ಇನ್ನು ಅಧಿಕಾರಿಗಳ ವಿಷಯ ಅಂತು ಹೇಳುವುದೇ ಬೇಡ ಎಂದು ಅಶೋಕ್ ಟೀಕಿಸಿದ್ದಾರೆ.
ಹೀಗಿರುವಾಗ ವಿಧಾನಸೌಧ ಬ್ರೋಕರ್ ಗಳ ಅಡ್ಡ ಆಗದೆ ಇನ್ನೇನಾಗುತ್ತದೆ. ಆರೂವರೆ ಕೋಟಿ ಕನ್ನಡಿಗರ ಬಾಳಿಗೆ ಬೆಳಕಾಗಬೇಕಾಗಿದ್ದ ವಿಧಾನಸೌಧ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬ್ರೋಕರ್ ಗಳು ಜನರನ್ನು ಕಿತ್ತು ತಿನ್ನುವ ಅಡ್ಡಾ ಆಗಿದೆ.
ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕ ಉಳಿಸಿ ಎಂದು ಅವರು ತಾಕೀತು ಮಾಡಿದ್ದಾರೆ.

