ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದುವೆಯಾಗಲು ಪೂಜೆ ಮಾಡಬೇಕು ಎಂಬ ನೆಪವೊಡ್ಡಿ 2 ಲಕ್ಷ ರೂ.ಗಳನ್ನು ಯುವತಿಯಿಂದ ಸುಲಿಗೆ ಮಾಡಿದ ಆರೋಪದ ಮೇಲೆ ಗುರೂಜಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡುಗೋಡಿಯ ಪಿಜಿಯೊಂದರಲ್ಲಿನೆಲೆಸಿದ್ದ ಯುವತಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಇನ್ಸ್ಟಾಗ್ರಾಮ್ ನೋಡುವಾಗ ಚಂದ್ರಶೇಖರ್ ಸುಗತ್ ಗುರೂಜಿಯಿಂದ ಎಲ್ಲಾ ಕಷ್ಟಗಳನ್ನ ಪರಿಹರಿಸಲಾಗುವುದು ಎಂಬ ಜಾಹೀರಾತು ನೋಡಿ ಪ್ರೇರಿತಗೊಂಡಿದ್ದರು. ಮೊಬೈಲ್ ನಂಬರ್ ಪಡೆದು ಗುರೂಜಿಗೆ ಕರೆ ಮಾಡಿ ತನಗೆ ಮದುವೆಯಾಗಲಿದೆಯಾ ಎಂದು ಪ್ರಶ್ನಿಸಿದ್ದಳು.
ಇದಕ್ಕೆ ಉತ್ತರಿಸಿದ ಗುರೂಜಿ, ಮದುವೆಯಾಗಲಿದೆ. ಆದರೆ, ಹಣ ಖರ್ಚಾಗಲಿದೆ ಅಂತ ಹೇಳಿದ್ದರು. ಅದರಂತೆ ಆತನ ಮಾತನ್ನ ನಂಬಿ ಹಂತ-ಹಂತವಾಗಿ 2 ಲಕ್ಷ ರೂ.ವರೆಗೆ ಹಣ ನೀಡಿದ್ದೆ. ಹೇಳಿದಂತೆ ಪೂಜೆ ಮಾಡಿದ್ದಾರೆ. ಆದರೆ, ಮದುವೆಯಾಗದಿದ್ದರೆ ಹಣ ವಾಪಸ್ ನೀಡುವಂತೆ ಕೇಳಿದ್ದೆ.
ಆದರೆ, ಆ ಗುರೂಜಿ ಹಣ ಮರಳಿ ವಾಪಸ್ ನೀಡುವುದಿಲ್ಲ, ಏನಾದರೂ ಮಾಡಿಕೊ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಗುರೂಜಿ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

