ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ‘ಗಂಗಾ ಕಲ್ಯಾಣ‘ ಯೋಜನೆ ಕೂಡ ಅಕ್ಷರಶಃ ಹಳ್ಳ ಹಿಡಿದಿದೆ. ಇವರ ಭ್ರಷ್ಟಾಚಾರ, ಓಟ್ ಬ್ಯಾಂಕ್ ಓಲೈಕೆ ರಾಜಕೀಯಗಳ ಅಬ್ಬರದಲ್ಲಿ ಅನ್ನದಾತನ ಬದುಕು ಕತ್ತಲಿಗೆ ತಳ್ಳಲ್ಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಗಂಗಾ ಕಲ್ಯಾಣ ಫಲಾನುಭವಿಗಳ ಸಂಖ್ಯೆ 11,866 ರಿಂದ 3,262 ಕ್ಕೆ ಕುಸಿದಿರುವುದು ನಮ್ಮ ಅನ್ನದಾತ ರೈತರಿಗೆ ಈ ಸರ್ಕಾರ ಮಾಡಿದ ಮಹಾದ್ರೋಹ. ಒಂದು ಕಡೆ ಅನುದಾನದ ಕೊರತೆ, ಇನ್ನೊಂದು ಕಡೆ ಕಮಿಷನ್ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಯೋಜನೆ ಭ್ರಷ್ಟರ ಪಾಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರೈತರ ಹಿತವನ್ನು ಬಲಿಕೊಟ್ಟು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ‘ಶೂನ್ಯ ಅಭಿವೃದ್ಧಿ ಆಡಳಿತ‘ಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುವ ಗಂಗಾ ಕಲ್ಯಾಣ ಯೋಜನೆಯನ್ನೂ ಕೂಡ ಹಾಳು ಮಾಡಿ, ಅರಸ್ ಅವರ ದಾಖಲೆ ಹಿಂದಿಕ್ಕಿದೆ ಎಂದು ನೀವು ಹೇಳಿಕೊಳ್ಳುವುದು ವಿಪರ್ಯಾಸವೇ ಸರಿ! ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

