ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇವು ಬೆಲ್ಲದ ಬುತ್ತಿ:
ನನ್ನವ್ವ ಅಪ್ಪನ ಶ್ರಮದ ಸೂರು
ಬಾದೆ ಹೊದಿಕೆ ಬಂದರಿಕೆ ನೆರಿಕೆ
ಮಣ್ಣ ಮೆದಿಕೆ ಬುಡ್ಡಿಯ ಬೆಳಕು
ಬಾಗಿಲು ತಡಿಕೆ ತಗಡಿನ ಮುಚ್ಚಿಕೆ
ಚಿತ್ತಾರಗಳ ಕನಸವು ಹತ್ತಾರು
ಕಲಿಕೆಯಾಸೆ ಮುಗಿಲಾದವು ಅಕ್ಷರ
ಅನಾದಿ ಬೇರುಗಳ ಹಾದಿಯೇ ಬೆವರು
ದರ್ಪದೆದುರು ಹಸಿವ ಹೊದ್ದವರು
ಮಾರುಕಟ್ಟೆ ಸಂತೆಯ ಮಳಿಗೆಗಳಲಿ
ಹೆತ್ತಾಗಿ ನೊಗಕೆ ಹೆಗಲಾದವರು
ತಳಕಾಳು ಕಸದಲಿ ತುತ್ತ ಹೆಕ್ಕಿದವರು
ಕಳೆದ ನೆನ್ನೆಯಲಿ ನಾಳೆಗಳು ಗೊತ್ತಿಲ್ಲ
ಉಸಿರು ಊಟ ಓಟ ಆ ಹೊತ್ತಿಗಷ್ಟೇ
ಚಿಂತೆಗೆ ನಿಲುಕದ ರೆಕ್ಕೆಗಳ ಬದುಕು
ಬೇಗೆಯ ಯುದ್ಧದಿ ಬಿದ್ದೆದ್ದವರು
ಸಾಲು ಸಾವೊಳಗೆ ಹಬ್ಬ ಉಂಡವರು
ಮರೆಯಲಿ ಹ್ಯಾಂಗ ನೆನಪಿನಂಗಳ
ನನ್ನ ಬಾಳ ಬುತ್ತಿ ಬೇವು ಬೆಲ್ಲದ ತೇರು
ಕವಿತೆ:ಕುಮಾರ್ ಬಡಪ್ಪ

