ಕೇರಳದ ಶಾಸಕನಂತೆ, ವಯನಾಡಿನ ಚಂದಾ ವಸೂಲಿಗಾರನಂತೆ ವರ್ತಿಸುವ ಮುಖ್ಯಮಂತ್ರಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರೇ, ಕೇರಳದ ಶಾಸಕನಂತೆ, ವಯನಾಡಿನ ಚಂದಾ ವಸೂಲಿಗಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆ ಇನ್ನೆಷ್ಟು ದಿನ ಸಹಿಸಬೇಕು? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಕನ್ನಡಿಗರ ತೆರಿಗೆ ಹಣದಿಂದ 10 ಕೋಟಿ ರೂಪಾಯಿಯನ್ನ ವಯನಾಡಿಗೆ ಬಿಡುಗಡೆ ಮಾಡಿದಿರಿ. ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಟ್ಟಿರಿ.

- Advertisement - 

ಭೂಕುಸಿತದ ನಂತರ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸುವ ಘೋಷಣೆ ಮಾಡಿದಿರಿ. ಈಗ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ (KSTDC) ವಯನಾಡಿನ ಪ್ರವಾಸೋದ್ಯಮಕ್ಕೆ ಜಾಹೀರಾತು ಕೊಟ್ಟಿದ್ದೀರಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಶಾಸಕರೋ? ಅಥವಾ ವಯನಾಡಿನ ಚಂದಾ ವಸೂಲಿಗಾರರೋ? ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದೆ. ರೈತರು ಕಂಗಾಲಾಗಿದ್ದಾರೆ. 

- Advertisement - 

ಮನೆಗಳು ಕೊಚ್ಚಿ ಹೋಗಿವೆ. 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಅಶೋಕ್  ಟೀಕಿಸಿದ್ದಾರೆ.
 ಆದರೆ ಪರಿಹಾರ ಮಾತ್ರ ವೈಮಾನಿಕ ಸಮೀಕ್ಷೆಗಳಿಗೆ, ಸುಳ್ಳು ಭರವಸೆಗಳಿಗೆ, ಜಾಹೀರಾತುಗಳಿಗೆ, ಫೋಟೋಶೂಟ್‌ಗಳಿಗೆ ಸೀಮಿತವಾಗಿದೆ.

ವಯನಾಡಿನ ಸಂಕಷ್ಟಕ್ಕೆ ಮಿಡಿಯುವ ನಿಮ್ಮ ಹೃದಯ ನೆರೆಭಾದಿತ ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಳಗಾವಿಗಾಗಿ ಯಾಕೆ ಮಿಡಿಯುತ್ತಿಲ್ಲ? ಯಾಕೆ ಸ್ವಾಮಿ ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ?

ನಮ್ಮ ರೈತರಿಗೆ ನೀಡಬೇಕಾದ ಪರಿಹಾರಕ್ಕಿಂತ, ವಯನಾಡಿಗೆ ನೀಡುವ ಪರಿಹಾರವೇ ನಿಮಗೆ ಮುಖ್ಯ. ಇದು ಉಪಕಾರವೂ ಅಲ್ಲ, ಮಾನವೀಯತೆಯೂ ಅಲ್ಲ. ಇದು ಹೈಕಮಾಂಡ್ ನಾಯಕರನ್ನು ತೃಪ್ತಿಪಡಿಸಿ ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ.

ಕರ್ನಾಟಕದ ತೆರಿಗೆ ಹಣವನ್ನು ಹೈಕಮಾಂಡ್ ಎಟಿಎಂ ಹಾಗೆ ಬಳಸುವ, ನಕಲಿ ಗಾಂಧಿಗಳ ಗುಲಾಮರಂತೆ ವರ್ತಿಸುವ, ಮತ ಹಾಕಿ ಅಧಿಕಾರ ಕೊಟ್ಟ ತಾಯ್ನಾಡಿನ ರೈತರನ್ನೇ ಮರೆತುಬಿಡುವ ನಾಡದ್ರೋಹಿ ಮುಖ್ಯಮಂತ್ರಿಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ಕರ್ನಾಟಕಕ್ಕೆ ಬೇಕಿರುವುದು ಕನ್ನಡಿಗರ ಹಿತಾಸಕ್ತಿ ಕಾಪಾಡುವ ಬದ್ಧತೆ ಇರುವ ಮುಖ್ಯಮಂತ್ರಿಯೇ ಹೊರತು ಕೇರಳದ ವಯನಾಡಿನ ಬ್ರ್ಯಾಂಡ್ ಅಂಬಾಸಡರ್ ಅಲ್ಲ, ಡೆಲ್ಲಿ ದೊರೆಗಳ ಗುಲಾಮರಲ್ಲ.
ನೆರೆಬಾಧಿತ ರೈತರಿಗೆ ಈ ಕೂಡಲೇ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಿ. ಕರ್ನಾಟಕ ಹಣವನ್ನು ನಿಮ್ಮ ಸ್ವಾರ್ಥಕ್ಕಾಗಿ ವಯನಾಡಿಗೆ ಸಾಗಿಸುವುದನ್ನ ನಿಲ್ಲಿಸಿ ಅಶೋಕ್ ತಾಕೀತು ಮಾಡಿದ್ದಾರೆ.

 

Share This Article
error: Content is protected !!
";