ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸರ ಹೆಸರಲ್ಲಿ ಮನೆಗೆ ನುಗ್ಗಿದ ಗ್ಯಾಂಗ್ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಿಂದ ಬರೋಬ್ಬರಿ 20 ಲಕ್ಷ ನಗದು ಮತ್ತು ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಿಇಎಲ್ ಲೇಔಟ್ನಲ್ಲಿ ನಡೆದಿತ್ತು.
ಬ್ಯಾಡರಹಳ್ಳಿ ಪೊಲೀಸರು ಈ ಪ್ರಕರಣ ಭೇದಿಸಿದ್ದು ನಾಗೇಂದ್ರ ಹಾಗೂ ಬಚ್ಚನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ತನಿಖೆ ಮುಂದುವರಿದಾಗ ಅಸಲಿ ಸತ್ಯ ಬಯಲಾಗಿದ್ದು, ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಹೆಸರು ರಿವೀಲ್ ಆಗಿದೆ.
ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿದವ ಲಾಕ್:
ಹೊಂಬೇಗೌಡ ಮನೆಯಲ್ಲಿ ನಡೆದ ದರೋಡೆ ಹಿಂದೆ ಅವರ ಪ್ರಾಣ ಸ್ನೇಹಿತ ಬೆಟ್ಟೇಗೌಡ ಎಂಬಾತನ ಪಾತ್ರ ಇರೋದು ಬಯಲಾಗಿದೆ. ಸೈಟ್ ಮಾರುವ ಸಂಬಂಧ ಸ್ಟಾಂಪ್ ವೆಂಡರ್ ಆಗಿರುವ ಬೆಟ್ಟೇಗೌಡನ ಬಳಿಯೇ ಹೊಂಬೇಗೌಡರು ಪೇಪರ್ ಮಾಡಿಸಿದ್ದರು.
ಹೀಗಾಗಿ ಸ್ನೇಹಿತನ ಬಳಿ ಸೈಟ್ ಮಾರಿದ ಹಣ ಇದೆ ಎಂದು ತಿಳಿದಿದ್ದ ಆರೋಪಿ, ದರೋಡೆ ಮಾಡುವಂತೆ ಜೈಲಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಐಡಿಯಾ ಕೊಟ್ಟಿದ್ದ. ಶಿವಾಜಿನಗರದಲ್ಲಿ ಶೂಟಿಂಗ್ಗೆ ಎಂದು ಹೇಳಿ ಸಬ್ ಇನ್ಸ್ಪೆಕ್ಟರ್ ಡ್ರೆಸ್ ಬಾಡಿಗೆಗೆ ತಂದಿದ್ದ ನಾಗೇಂದ್ರ, ಅದೇ ಡ್ರೆಸ್ ಹಾಕಿಕೊಂಡು ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಎಂಬುದು ಗೊತ್ತಾಗಿದೆ.
ಘಟನೆ ಏನಾಗಿತ್ತು?
ಹೊಂಬೇಗೌಡ ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದ ವೇಳೆ ಪೊಲೀಸರಂತೆ ವೇಷಧರಿಸಿ ಮನೆಗೆ ನುಗ್ಗಿದ ಆರೋಪಿಗಳು, ತಾವು ಯಲಹಂಕ ಠಾಣೆಯಿಂದ ಬಂದಿದ್ದೇವೆ ಎಂದು ತಿಳಿಸಿದ್ದರು. ಇವರು ಬ್ಯಾಗ್ ಮತ್ತು ಡೈರಿಯನ್ನೂ ಹಿಡಿದು ಬಂದಿದ್ದ ಕಾರಣ ಆರಂಭದಲ್ಲಿ ಮನೆಯವರೂ ಆರೋಪಿಗಳ ಮಾತು ನಂಬಿದ್ದರು. ಆದರೆ ಬಳಿಕ ಆರೋಪಿಗಳು ವೃದ್ಧ ದಂಪತಿಯನ್ನು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿದ್ದರು. ಅಲ್ಲದೆ ಅವರ ಕೈಕಾಲುಗಳನ್ನು ಕಟ್ಟಿ. ನಗದು ಮತ್ತು ಚಿನ್ನಾಭರಣ ದೋಚಿದ್ದರು ಎನ್ನಲಾಗಿದೆ.

