ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾಮಾಜಿಕ ಚಳುವಳಿಗಳ ಹಿಂದೆ ಸಂತರಿದ್ದಾರೆ. ಹೊಸ ಸಾಂಸ್ಕೃತಿಕ ಪದ್ದತಿಯನ್ನು ಹುಟ್ಟು ಹಾಕುವುದು ಸಾಂಸ್ಕೃತಿಯ ಚಳುವಳಿಯ ಮುಖ್ಯ ಭಾಗ ಎಂದು ರಹಮತ್ ತರಿಕೆರೆ ಹೇಳಿದರು.
ಎದ್ದೇಳು ಕರ್ನಾಟಕ, ನಾಡು ನುಡಿ ಬಳಗ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಂಬೇಡ್ಕರ್ ವಿಚಾರ ವೇದಿಕೆ ಸಹಯೋಗದೊಂದಿಗೆ ಧಮ್ಮ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವಿನ ಚಾವಡಿಯಲ್ಲಿ ನಾಗರೀಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ ವಿಷಯ ಕುರಿತು ಮಾತನಾಡಿದರು.
ಪ್ರಗತಿಪರರು, ಪ್ರತಿಗಾಮಿಗಳು ಸಾಂಸ್ಕೃತಿಕ ರಾಜಕಾರಣ ಮಾಡುತ್ತಾರೆ. ಧರ್ಮ, ಭಾಷೆ, ನಂಬಿಕೆ, ಪರಂಪರೆ ಇವುಗಳನ್ನೆಲ್ಲಾ ಭಾವನಾತ್ಮಕ ಸಂಬಂಧಗಳಿಗೆ ಬಳಸಿಕೊಂಡು ಜನರನ್ನು ಸಂಘಟಿಸಬಹುದು, ವಿಭಜಿಸಲೂಬಹುದು. ಓಬವ್ವ, ಟಿಪ್ಪು, ಕಿತ್ತೂರುರಾಣಿ ಚೆನ್ನಮ್ಮ, ಇವರುಗಳ ಹೆಸರುಗಳನ್ನು ಬಳಸಿಕೊಂಡು ಸಾಂಸ್ಕೃತಿಕ ರಾಜಕಾರಣ ಕಟ್ಟಲಾಗುತ್ತಿದೆ.
ಚುನಾವಣೆಗಳನ್ನು ಗೆಲ್ಲಲು ಸಾಂಸ್ಕೃತಿಕ ರಾಜಕಾರಣ ಮಾಡುತ್ತಿರುವುದು ಹೊಸದೇನಲ್ಲ. ಸಂಸ್ಕೃತಿ ಅನ್ನುವುದೇ ರಾಜಕೀಯ ಪರಿಭಾಷೆಯಾಗಿದೆ. ಸಾಂಸ್ಕೃತಿಕ ರಾಜಕಾರಣ ಹಳೆ ಮತ್ತು ಹೊಸ ನಂಬಿಕೆಗಳನ್ನು ಮುಂದುವರೆಸುತ್ತಿದೆ. ಪ್ರತಿನಿತ್ಯ ಸೇವಿಸುವ ಆಹಾರದ ಮೇಲೆ ನಿರಂತರ ದಾಳಿಯಾಗುತ್ತಿರುವುದು ವಿಪರ್ಯಾಸ ಎಂದು ವಿಷಾಧಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಲಾ ಪ್ರಕಾರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಸಾಂಸ್ಕೃತಿಕ ರಾಜಕೀಯ ಹೋರಾಟಕ್ಕೆ ಶಕ್ತಿ ಕೊಡುವ ಆಕಾರಗಳಿವೆ. ಸಾಮಾಜಿಕ ಸಮಾನತೆಗಾಗಿ ಬಾಬಾ ಸಾಹೇಬರ ಹೋರಾಟವಾಗಿತ್ತು. ಕೋರೆಗಾಂವ್ ರಾಜಕೀಯಕ್ಕೆ ಸಂಬಂಧಿಸಿದ್ದು, ಪ್ರಾರ್ಥನೆ, ಉಪ್ಪು, ಚರಕ ಇವುಗಳು ಗಾಂಧಿಜಿಯವರದಾಗಿತ್ತು.
ಕೋಮುವಾದ, ಮತಾಂತರ, ಹೆಸರುಗಳ ಬದಲಾವಣೆ, ಸ್ಮಾರಕಗಳ ನಾಶ, ಇಲ್ಲವಾಗಿಸುವುದು, ಸಾಂಸ್ಕೃತಿಕ ತಬ್ಬಲಿತನ, ದೀರ್ಘಕಾಲದ ರಾಜಕಾರಣ ಹೊಸ ಆಚರಣೆಗಳ ಸೃಷ್ಠಿ. ಸಾಂಸ್ಕೃತಿಕ ಚಳುವಳಿ ಅಭಿಯಾನ ಕರ್ನಾಟಕದ ಚಳುವಳಿಗಿದೆ ಎಂದರು.
ಡಾ.ದೊಡ್ಡಮಲ್ಲಯ್ಯ, ಡಾ.ಮಮತ ಇವರುಗಳು ರಹಮತ್ ತರಿಕೆರೆಯವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

