ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳ ಮೀಸಲಾತಿ ಜಾರಿ ಮುಂದೂಡಲು ಸರ್ಕಾರ ಯಾವುದೇ ತಂತ್ರಗಾರಿಕೆ ಮಾಡದೆ, ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ವರದಿಯನ್ನ ಜಾರಿ ಮಾಡಬೇಕು. ವರದಿಯನ್ನ ಬಿಡುಗಡೆ ಮಾಡಲು ಅವಶ್ಯಕತೆ ಇಲ್ಲದಿದ್ದಲ್ಲಿ, ತುರ್ತು ಮಧ್ಯಂತರ ವರದಿಯನ್ನ ಜಾರಿ ಮಾಡಬೇಕು, ತಮಿಳುನಾಡು ಮಾದರಿಯಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಪ್ರತ್ಯೇಕ 6 ರಷ್ಟು ಮೀಸಲಾತಿ ಜಾರಿ ಮಾಡಬೇಕೆಂದು ಮಾದಿಗ ಸಮುದಾಯದ ಮುಖಂಡ ಹೆಚ್.ವೆಂಕಟೇಶ್ ದೊಡ್ಡೇರಿ ಸರ್ಕಾರವನ್ನ ಆಗ್ರಹಸಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೈಕೋರ್ಟ್ ವಕೀಲರು ಹೆಚ್.ವೆಂಕಟೇಶ್ ದೊಡ್ಡೇರಿ, ನನ್ನ ಪ್ರಕಾರ ಒಳ ಮೀಸಲಾತಿ ಜಾರಿಯಾದರೆ, ಪರಿಶಿಷ್ಟ ಜಾತಿಯಲ್ಲಿರುವ ನೂರೊಂದು ಜಾತಿಗಳಿಗೂ ಸಮನಾಗಿ ಹಂಚಿಕೆಯಾಗುವುದು, ಈ ಬಗ್ಗೆ ಪರಿಶಿಷ್ಟ ಸಮುದಾಯದಲ್ಲಿನ ಬೇರೆಯವರ ತಕರಾರು ಇದ್ದಲ್ಲಿ, 2004ರಲ್ಲಿ ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಆರುಂಧತಿಯಾರ್ ಸಮುದಾಯಕ್ಕೆ ಶೇಕಡ 3 ರಷ್ಟು ಮೀಸಲಾತಿಯನ್ನ ನೀಡಿದೆ, ಹಾಗೆಯೇ ಕರ್ನಾಟಕ ಮಾದಿಗ ಸಮುದಾಯಕ್ಕೆ 6 ರಷ್ಟು ಮೀಸಲಾತಿ ನೀಡಿ, ಅನಂತರ ದತ್ತಾಂಶಗಳನ್ನ ತೆಗೆದು ತಿರ್ಮಾನ ಮಾಡುವಂತೆ ಹೇಳಿದರು.
ಮಾದಿಗ ಸಮುದಾಯಕ್ಕೆ 6 ರಷ್ಟು ಮೀಸಲಾತಿ ಕೊಡುವಂತೆ ನಾವೇಲ್ಲ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡದೆ. ಕಣ್ಣೋರಿಸುವ ಕೆಲಸ ಮಾಡದೆ ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ನೀಡಿದ ಅವಧಿ ವಿಸ್ತರಣೆ ಮಾಡದೆ ಒಳ ಮೀಸಲಾತಿ ನೀಡ ಬೇಕು. ಇತಿಹಾಸ ನೋಡಿದಾಗ ಸರ್ಕಾರಗಳು ವ್ಯವಸ್ಥಿತವಾಗಿ ಒಳ ಮೀಸಲಾತಿಯನ್ನ ತುಳಿಯುತ್ತಲೇ ಬಂದಿದೆ ಎಂದರು.
ಮುಖಂಡರಾದ ದೊಡ್ಡತುಮಕೂರಿನ ರಾಮಕೃಷ್ಣಪ್ಪ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿನ 13 ಜಿಲ್ಲೆಗಳಲ್ಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿಗಳ ಬಗ್ಗೆ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ನ್ಯಾ.ನಾಗಮೋಹನ ದಾಸ್ ಆಯೋಗ ರಚನೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ಸಬೂಬು ಹೇಳದೆ ಒಳ ಮೀಸಲಾತಿ ಜಾರಿ ಮಾಡಬೇಕು. ನಾವು ಯಾರ ಪಾಲನ್ನು ಕೇಳುತ್ತಿಲ್ಲ, ನಮ್ಮ ಪಾಲಿನ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡ ರಾಮಕೃಷ್ಣಪ್ಪ ದೊಡ್ಡತುಮಕೂರು, ವೆಂಕಟೇಶ್ ದೊಡ್ಡತುಮಕೂರು, ಹನುಮಂತಯ್ಯ ಹಳೇಕೋಟೆ, ತಳವಾರ ನಾಗರಾಜು, ಹರ್ಷ ಹಾದ್ರಿಪುರ, ವಕೀಲರಾದ ಕಾಂತರಾಜು, ತೂಬಗೆರೆ ವೆಂಕಟೇಶ್, ಮಂಜುನಾಥ್, ಆರ್.ವಿ.ಶಿವಕುಮಾರ್, ನಾರಸಿಂಹನಹಳ್ಳಿ ಗಂಗರಾಜು,ಕುಂಬಾರಪೇಟೆ ನಾರಾಯಣಪ್ಪ ಹಾಜರಿದ್ದರು.