ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸುಧಾರಣಾ ಸಮಿತಿ ತಂಡವು ಭೇಟಿ ನೀಡಿ ಸರ್ಕಾರಿ ಶಾಲೆಗಳಿಗೆ ಬೇಕಾಗಿರುವ ಶುದ್ಧ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್ ನಿರ್ಮಾಣ, ಕಟ್ಟಡ ದುರಸ್ಥಿ ಹಾಗೂ ಕಲಿಕೋಪಕರಣಗಳ ಅಗತ್ಯತೆಗಳ ಬಗ್ಗೆ ಪರಿಶೀಲಸರಾಯಿತು.
ಅವುಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಎ ಎಂ ಅಮೃತೇಶ್ವರ ಸ್ವಾಮಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳಾದ ಸಿ ಆರ್ ಪಿ, ಬಿ ಆರ್ ಪಿ, ಇ ಸಿ ಓ ಗಳಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಎ ಎಂ ಅಮೃತೇಶ್ವರ ಸ್ವಾಮಿ ಮಾತನಾಡಿದರು
ಗ್ರಾಮ ಪಂಚಾಯ್ತಿ ವಾರು ತಂಡವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಈ ಭೇಟಿ ಸಾಮಾನ್ಯ ಭೇಟಿ ಆಗದೇ ಕ್ರಿಯಾತ್ಮಕ ಪ್ರಗತಿಯ ಸಂದರ್ಶನವಾಗಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಸುದಾರಣಾ ಸಮಿತಿಯ ತಂಡ ಶಾಲೆಗಳಿಗೆ ಭೇಟಿ ನೀಡಿದಾಗ ನೀಡಬೇಕಾದ ಮಾಹಿತಿಯ ನಮೂನೆಯ ಬಗ್ಗೆ ವಿವರಿಸಿದರು.
ಹಾಗೂ ನೈಜ ಮಾಹಿತಿಯನ್ನು ತಂಡಕ್ಕೆ ಮನವರಿಕೆ ಮಾಡಿಕೊಡಲು ಕ್ಷೇತ್ರ ಸಮನ್ವಯಾಧಿಕಾರಿ ಆರ್ ಟಿ ಎಸ್ ಶ್ರೀನಿವಾಸ ತಿಳಿಸಿದರು.
ಪಠ್ಯ ಬೋಧನೆಗೆ ಪೂರಕವಾದ ಸ್ಮಾರ್ಟ್ ಟಿ ವಿ ಅಗತ್ಯವೆಂದು ರಂಗೇನಹಳ್ಳಿ ಕ್ಲಸ್ಟರ್ ಸಿ ಆರ್ ಪಿ ಯಾದ ಸಿ ಪವಿತ್ರ ತಿಳಿಸಿದರು.
ನೆಲಸಮಗೊಳಿಸ ಬೇಕಾದ ಶಾಲಾ ಕಟ್ಟಡಗಳ ಬಗ್ಗೆ ಬೇಗನೆ ಕ್ರಮ ಕೈಗೊಳ್ಳಲು ನಗರ ದಕ್ಷಿಣ ಕ್ಲಸ್ಟರ್ ಸಿ ಅರ್ ಪಿ ಚರಣ್ ರಾಜ್ ಮನವಿಮಾಡಿದರು. ಸಮಾಜ ವಿಜ್ಞಾನದ ಭೂಪಟಗಳನ್ನು ನೀಡಲು ಬಿ ಆರ್ ಪಿ ಕರಿಯಪ್ಪ ವಿನಂತಿಸಿದರು. ಆಟದ ಮೈದಾನ ಮತ್ತು ದೈಹಿಕ ಶಿಕ್ಷಕರು ಇರುವಲ್ಲಿ ಕ್ರೀಡಾ ಸಾಮಗ್ರಿಗಳನ್ನು ನೀಡಬೇಕೆಂದರು.
ಸಿ ಆರ್ ಪಿ ಯೋಗೇಶ್ ಮಾತನಾಡಿ ಪ್ರತಿ ಗ್ರಾಮ ಪಂಚಾಯ್ತಿ ವತಿಯಿಂದ ಶಾಲಾ ಶಿಕ್ಷಣಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಿರುವ ಶೇ 2 ಅನುದಾನ ಬಳಕೆಗೆ ಸೂಕ್ತ ನಿರ್ದೇಶನ ನೀಡಲು ಕೋರಿದರು.
ಇ ಸಿ ಓ ಜಾಫರ್ ವಿಜ್ಞಾನ ಕಿಟ್ ಗಳನ್ನು ನೀಡಲು ಕೋರಿದರು. ಮುಖ್ಯ ಶಿಕ್ಷಕರಿಗೆ ಕಾರ್ಯ ಭಾರ ಹೆಚ್ಚಿರುವುದರಿಂದ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೇ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರೊಬ್ಬರನ್ನು ನೀಡಲು ಸಿ ಆರ್ ಪಿ ಚನ್ನಕೇಶವ ಗೌಡ ವಿನಂತಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಅಂಜನಪ್ಪ, ನಯೀಮುದ್ದೀನ್, ನಾಗೇಂದ್ರನಾಯ್ಕ ಅನುಷ್ಟಾನಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ನೋಡಲ್ ಅಧಿಕಾರಿ ಡಯಟ್ ನ ಹಿರಿಯ ಉಪನ್ಯಾಸಕ ಎಸ್ ಸಿ ಪ್ರಸಾದ್, ಬಿ ಆರ್ ಪಿ ಪ್ರಸನ್ನ ಕುಮಾರ್ ಹಾಗೂ ಎಲ್ಲಾ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

