ಇಂದಿನಿಂದ ಮೂರು ದಿನ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಹಾಮಾನವತವಾದಿ ಜಗಜ್ಯೋತಿ ಬಸವೇಶ್ವರ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರರ ಜಯಂತಿಯನ್ನು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ೨೮
, ೨೯ ಹಾಗೂ ೩೦ರಂದು ಅರ್ಥಪೂರ್ಣವಾಗಿ ಅಷ್ಟೇ ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆದಿದೆ.

ಅದರಂತೆ ಜಯಂತಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ೨೮ರಂದು ಬೆಳಗ್ಗೆ ಶ್ರೀಮಠದ ಆವರಣದಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ವಚನ ಕಂಠಪಾಠ ಸ್ಪರ್ಧೆ, ಮಹಿಳೆಯರಿಗಾಗಿ ಸಾಂಪ್ರದಾಯಿಕ ಮತ್ತು ಬಸವಾದಿ ಶಿವಶರಣರ ಭಾವಚಿತ್ರಗಳ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಾಗೆಯೇ ವಯಸ್ಕರು ಹಾಗೂ ಮಕ್ಕಳಿಗಾಗಿ ಬಸವಾದಿ ಶಿವಶರಣರ  ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸಂಜೆ ೬ ಗಂಟೆಗೆ ಅನುಭವ ಮಂಟಪದಲ್ಲಿ ಚಿಂತನಗೋಷ್ಠಿ ನಡೆಯಲಿದ್ದು, ಮೈಸೂರಿನ ಕುಂದೂರು ಮಠದ  ಡಾ.ಶರಶ್ಚಚಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬಸವ ಬೆರಗು(ಶರಣರ ದೃಷ್ಟಿಯಲ್ಲಿ ಬಸವಣ್ಣನವರು) ವಿಷಯ ಕುರಿತು ಚಿಂತನ ನೀಡುವರು. ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅಧ್ಯಕ್ಷತೆ ವಹಿಸುವರು. ಬಸವಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಶರಣಸಂಸ್ಕೃತಿ ನಿಜಾಚರಣೆಗಳು ವಿಷಯಾವಲೋಕನ ಮಾಡುವರು.

ಮುಖ್ಯ ಅತಿಥಿಗಳಾಗಿ ಸಂಸದ ಗೋವಿಂದ ಎಂ. ಕಾರಜೋಳ, ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ ಅವರುಗಳು ಭಾಗವಹಿಸಲಿದ್ದಾರೆ. ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾನಯಾಗಿ ಸಂಗೀತ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ ಅವರಿಂದ ವಚನ ಸಂಗೀತ ನಡೆಯಲಿದೆ.

೨೯ರಂದು ಶ್ರೀಮಠದ ಆವರಣದಲ್ಲಿ ಬೆಳಗ್ಗೆ ೧೦ ಗಂಟೆಗೆ ಪಿಯುಸಿ ಹಾಗೂ ಪದವೀಧರರಿಗೆ “ಸಾಂಸ್ಕೃತಿಕ ನಾಯಕ ಬಸವಣ್ಣ” ವಿಷಯ ಕುರಿತು ಭಾಷಣ ಸ್ಪರ್ಧೆ, ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ “ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣ” ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸಂಜೆ ೬.೦೦ ಗಂಟೆಗೆ ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯ ಕುರಿತು ಚಿಂತನ ಗೋಷ್ಠಿ ನಡೆಯಲಿದ್ದು, ಇಳಕಲ್‌ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ. ಸಿ. ಕಳಸದ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ವಹಿಸಲಿದ್ದು, ಡಾ. ಬಿ. ರಾಜಶೇಖರಪ್ಪ ಅವರ ಸಂಪಾದಕತ್ವದಲ್ಲಿ ಶ್ರೀಮಠದ ವತಿಯಿಂದ ಸತ್ಯಶುದ್ಧ ಕಾಯಕ ಎಂಬ ತ್ರೈಮಾಸಿಕ ಪತ್ರಿಕೆ ಬಿಡುಗಡೆಯಾಗಲಿದೆ.

ಅಂದಿನ ಸಮಾರಂಭದಲ್ಲಿ ಆರ್ಥಿಕ ಚಿಂತಕ ಹೊಸಪೇಟೆಯ ಟಿ.ಆರ್. ಚಂದ್ರಶೇಖರ್ ಅವರು ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯ ಮಂಡನೆ ಮಾಡುವರು. ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಹಾಗೂ ಚಿತ್ರದುರ್ಗ ಜಿ ಕೆಡಿಪಿ ಸದಸ್ಯರಾದ ಕೆ.ಸಿ. ನಾಗರಾಜ್ ಉಪಸ್ಥಿತರಿರುವರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಡಾ. ಪಂಡಿತ್ ಮುದ್ದು ಮೋಹನ್, ಇವರು ವಚನ ಗಾಯನ ನಡೆಸಿಕೊಡಲಿದ್ದಾರೆ. ನಂತರ ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಅನುಭವ ಮಂಟಪ ನೃತ್ಯ ರೂಪಕ ನಡೆಸಿಕೊಡಲಿದ್ದಾರೆ. ಹಾಗೆಯೇ ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭಾವಿ ಮತದಾರರಿಗೆ ಅರಿವು ವಿಷಯ ಕುರಿತು ರೂಪಕ ಅಭಿನಯಿಸಲಿzರೆ.

೩೦ರ ಬೆಳಗ್ಗೆ ೧೦ ಗಂಟೆಗೆ ಬಸವಣ್ಣನವರ ಜಯಂತೋತ್ಸವವು ಚಿತ್ರದುರ್ಗ ಸಮೀಪದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದಿನ ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ  ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರು ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಪಿ.ಎಸ್.  ಶಂಕರ್  ಹಾಗೂ ಚಂದ್ರಶೇಖರ್ ಎಸ್.ಎನ್. ಅವರುಗಳು ಭಾಗವಹಿಸಲಿದ್ದಾರೆ. ರಾಯಚೂರು ಶ್ರೀ ಬಸವ ಸೇವಾ ಪ್ರತಿಷ್ಠಾನದ ಶರಣ ಬಸವರಾಜಸ್ವಾಮಿ ಅವರನ್ನು ಸನ್ಮಾನಿಸಲಾಗುವುದು.

ಸಂಜೆ ೪ ಗಂಟೆಗೆ ವಿಶ್ವಗುರು ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ವೀರಶೈವ ಸಮಾಜ  ಹಾಗೂ ನಗರದ ಎ ಸಮಾಜಗಳ ಸಹಯೋಗದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯು ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡು ಗಾಂಧಿವೃತ್ತ, ಆನೆಬಾಗಿಲು, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ, ಅಂಬೇಡ್ಕರ್ ವೃತ್ತ, ಬಿ.ಡಿ ರಸ್ತೆಯ ಮೂಲಕ ದೇವಸ್ಥಾನ ತಲುಪಲಿದೆ. ಈ ಸಮಾರಂಭಕ್ಕೆ ಶ್ರೀಮಠದ ಖಾಸಮಠ, ಶಾಖಾಮಠಗಳ ಹಾಗೂ ವಿವಿಧ ಸಮಾಜದ ಪೂಜ್ಯರುಗಳು ಆಗಮಿಸಲಿದ್ದು ಸಮಾರಂಭವು ನಗರದ ವಿವಿಧ ಸರ್ವ ಸಮಾಜಗಳ, ಸಂಘ ಸಂಸ್ಥೆಗಳ ಸಹಯೋಗದಲ್ಲಿ  ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

 

 

Share This Article
error: Content is protected !!
";