ಕಾವೇರಿ ಮಾತೆಗೆ ಒಗ್ಗಟ್ಟಿನ ಆರತಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಉದ್ಯಾನವನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಕಾವೇರಿ ಆರತಿಗೆ ಸಂಬಂಧಿಸಿದಂತೆ ಸ್ಥಳೀಯ ರೈತರು, ಅಧಿಕಾರಿಗಳು ಹಾಗೂ ಪಾಲುದಾರರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯ ನಂತರ ಇದೇ ಸಂದರ್ಭದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಡಿಸಿಎಂ ಅವರು ಮಾತನಾಡಿದರು.

ಕಾವೇರಿ ಆರತಿಯಿಂದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಎಲ್ಲರನ್ನೂ ಸಮಾನವಾಗಿ ಪೊರೆಯುವ ಕಾವೇರಿ ಮಾತೆಗೆ ನಾವೆಲ್ಲರೂ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಪ್ರಯತ್ನ ವಿಫಲವಾಗಬಹುದು,‌ ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ; ಮನಸ್ಸಿದ್ದಲ್ಲಿ ಮಾರ್ಗವಿದೆ, ಭಕ್ತಿ ಇದ್ದಲ್ಲಿ ಭಗವಂತನಿರುತ್ತಾನೆ ಎಂಬ ನಂಬಿಕೆ ನನಗಿದೆ ಎಂದು ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

- Advertisement - 

ರೈತರಿಗಿದ್ದ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕಾವೇರಿ ಆರತಿ ಮಾಡುತ್ತಿದ್ದೇವೆ. ಸ್ಥಳೀಯ ಪ್ರತಿನಿಧಿಗಳೂ ನಮಗೆ ಬೆಂಬಲವಾಗಿದ್ದಾರೆ. ಕಾವೇರಿ ಆರತಿಯಿಂದ ಡ್ಯಾಂಗೆ ಯಾವುದೇ ತೊಂದರೆಯಾಗುವುದಿಲ್ಲ. ವಿವಿಧ ಸಂಸ್ಕೃತಿಗಳ ಅನಾವರಣ, ಸಾವಿರಾರು ಉದ್ಯೋಗಗಳ ಸೃಷ್ಟಿ, ಪ್ರವಾಸೋದ್ಯಮದ ಅಭಿವೃದ್ಧಿ, ವ್ಯಾಪಾರ-ವಹಿವಾಟುಗಳ ವೃದ್ಧಿಯಾಗಲಿದೆ. ಕಾವೇರಿ ಮಾತೆಗೆ ನಾವೆಲ್ಲರೂ ಒಗ್ಗಟ್ಟಾಗಿ ದಸರಾದ ವೇಳೆ ವಿಜೃಂಭಣೆಯ ಆರತಿಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

ಸ್ಯಾಂಕಿ ಟ್ಯಾಂಕ್‌ನಲ್ಲಿ ನಡೆದ ಕಾವೇರಿ ಆರತಿಗೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ವಿವಿಧ ಇಲಾಖೆಗಳ ಸಮನ್ವಯತೆ ಹಾಗೂ ಅನುದಾನದೊಂದಿಗೆ ಕೆಆ‌ರ್‌ಎಸ್‌ನಲ್ಲಿ ವೈಭವದ ಆರತಿಯನ್ನು ಮಾಡಲಾಗುವುದು. ಅಧ್ಯಯನ ತಂಡವೊಂದು ಉತ್ತರ ಭಾರತದ ಪ್ರವಾಸ ಮಾಡಿ, ಗಂಗಾ ಆರತಿಯನ್ನು ವೀಕ್ಷಿಸಿ, ವರದಿಯನ್ನೂ ನೀಡಿದ್ದಾರೆ. ಆ ವರದಿಯನ್ವಯ ಕಾವೇರಿ ಆರತಿಯ ಕುರಿತಂತೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement - 

Share This Article
error: Content is protected !!
";