ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಲಕನ ಕುತ್ತಿಗೆ ಹಿಸುಕಿ ಸಾಯಿಸಿದ್ದ ಆರೋಪದಡಿ ಬಿಹಾರಮೂಲದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ತಮ್ಮ ಮಕ್ಕಳಿಗೆ ಪಕ್ಕದ ಮನೆಯ ಬಾಲಕ ಹೊಡೆಯುತ್ತಾನೆ ಎಂದು ಸಂದೇಶ್ವರ್ ಈ ಕೃತ್ಯ ಎಸಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಹತ್ಯೆಗೊಳಗಾದವನು 8 ವರ್ಷದ ಬಾಲಕ. ಆರೋಪಿ ಹಾಗೂ ಮೃತನ ಕುಟುಂಬಸ್ಥರು ಪರಪ್ಪನ ಅಗ್ರಹಾರದ ರಾಯಸಂದ್ರದಲ್ಲಿ ವಾಸಿಸುತ್ತಿದ್ದರು.
ಬಿಹಾರ ಮೂಲದ ಇಬ್ಬರ ಕುಟುಂಬವು ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದು ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ಸಂದೇಶ್ವರ್ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಟವಾಡುವ ವಿಚಾರದಲ್ಲಿ ಮೃತ ಬಾಲಕನಿಗೆ ಮತ್ತು ಹೆಣ್ಣು ಮಕ್ಕಳಿಗೆ ಜಗಳವಾಗುತ್ತಿತ್ತು. ಹಾಗಾಗಿ ಆರೋಪಿ ಬಾಲಕನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಜಗಳದಲ್ಲಿ ಮಧ್ಯ ಪ್ರವೇಶಿದ ಆರೋಪಿ ತಮ್ಮ ಮಕ್ಕಳಿಗೆ ಬಾಲಕ ಹೊಡೆಯುವುದನ್ನು ಸಹಿಸದೇ ಕೃತ್ಯವೆಸಗಲು ಮುಂದಾಗಿದ್ದ. ಇದರಂತೆ ಬಾಲಕನ ಕುತ್ತಿಗೆ ಹಿಸುಕಿ ಸಾಯಿಸಿ ಗೋಣಿ ಚೀಲದಲ್ಲಿ ಶವವನ್ನು ತುಂಬಿ ರಾಯಸಂದ್ರ ಕೆರೆ ಬಳಿ ಎಸೆದಿದ್ದ ಎನ್ನಲಾಗಿದೆ.
ಈಗ ಮೃತದೇಹ ಪತ್ತೆಯಾಗಿದ್ದು, ಪರಿಶೀಲಿಸಿ, ತನಿಖೆ ನಡೆಸಿದಾಗ ಆರೋಪಿ ಕೈವಾಡ ಇರುವುದು ಗೊತ್ತಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಧ್ಯಮಗಳಿಗೆ ಮಾಹಿತಿ ನೀಡಿ, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮೇ 6ರಂದು ಬಾಲಕ ನಾಪತ್ತೆದ್ದ. ಬಾಲಕನ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪಕ್ಕದ ಮನೆಯವನ ಜೊತೆ ಹೋಗಿರುವುದು ತಿಳಿದು ಬಂದಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮಕ್ಕಳು ಜಗಳ ಆಡುವ ವಿಚಾರ ಹಾಗೂ ತನ್ನ ಮಕ್ಕಳಿಗೆ ಬಾಲಕ ಹೊಡೆಯುತ್ತಾನೆ ಎಂದು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.