ಪತ್ರಕರ್ತರ ಮಾಸಾಶನದ ಕಠಿಣ ಷರತ್ತು ಸರಳೀಕರಣಕ್ಕೆ ಕ್ರಮ: ಕೆ.ವಿ.ಪ್ರಭಾಕರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿವೃತ್ತ ಪತ್ರಕರ್ತರ ಮಾಸಾಶನದಲ್ಲಿರುವ ಕಠಿಣ ಷರತ್ತುಗಳನ್ನು ಸರಳೀಕರಣ ಮಾಡಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ರಾಜ್ಯಾಧ್ಯಕ್ಷ  ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ವಿಧಾನಸೌಧದಲ್ಲಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಿತು.

ಅರ್ಹ ಪತ್ರಕರ್ತರಿಗೆ ಕೂಡಲೇ ಮಾಸಾಶನ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದಿದ್ದು, ವಾರ್ತಾ ಇಲಾಖೆ ಆಯುಕ್ತರ ಜೊತೆಗೆ ಮಾತನಾಡಲಾಗಿದೆ. ನಿಯಮಾವಳಿ ಸರಳೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಪ್ರಭಾಕರ್ ತಿಳಿಸಿದರು.

ಪತ್ರಕರ್ತರ ಮಾಸಾಶನ ನೀಡಲು ಕಠಿಣ ಷರತ್ತುಗಳನ್ನು ಹಾಕಿರುವುದನ್ನು ಕೈಬಿಡಬೇಕು. ಅರ್ಜಿ ಹಾಕಿದ ಪತ್ರಕರ್ತರಿಗೆ ಮಾಸಾಶನ ಮಂಜೂರು ಮಾಡಲು ಈ ಕಠಿಣ ಷರತ್ತುಗಳು ಅಡ್ಡಿಯಾಗಿರುವ ಕಾರಣ ಈ ಯೋಜನೆಯಿಂದ ಬಹುಪಾಲು ಪತ್ರಕರ್ತರು ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೂ ಅವರ ನಿವೃತ್ತಿ ಸಂದರ್ಭದಲ್ಲಿ ಮಾಸಾಶನ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಹಲವು ಪತ್ರಕರ್ತರಿಗೂ ಈ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ ಎಂದು  ಮನವಿಯಲ್ಲಿ ತಿಳಿಸಲಾಗಿದೆ.

 ಮಾಸಾಶನ ಮಂಜೂರು ಮಾಡಲು ಅಡ್ಡಿಯಾಗಿರುವ ಕಠಿಣ ಷರತ್ತುಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಸರಳೀಕರಣ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ನ ಆನಂದ ಬೈಂದಿನಮನೆ, ರಾಚಪ್ಪ ಮತ್ತಿತರರು ಹಾಜರಿದ್ದರು .

 

Share This Article
error: Content is protected !!
";