ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅನುಭವ ಮಂಟಪ–ಬಸವಾದಿ ಶರಣರ ವೈಭವ ರಥಯಾತ್ರೆಗೆ ಭಾನುವಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ರಥಯಾತ್ರೆಯನ್ನು ವಿವಿಧ ಜಾನಪದ ಕಲಾಮೇಳಗಳೊಂದಿಗೆ ಸ್ವಾಗತಿಸಿ, ಜಿಲ್ಲಾಡಳಿತದ ವತಿಯಿಂದ ಬಸವಾದಿ ಶರಣರಿಗೆ ಪುಷ್ಪನಮನ ಸಲ್ಲಿಸಿ, ಗೌರವ ಸಮರ್ಪಿಸಲಾಯಿತು.
ಇದೇ ಏ.29 ಮತ್ತು 30ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ “ಅನುಭವ ಮಂಟಪ–ಬಸವಾದಿ ಶರಣ ವೈಭವ” ಕಾರ್ಯಕ್ರಮದ ಅಂಗವಾಗಿ ರಥಯಾತ್ರೆ ಆಯೋಜಿಸಲಾಗಿದ್ದು, ತುಮಕೂರಿನಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ರಥಯಾತ್ರೆಯು ಶನಿವಾರ ರಾತ್ರಿ ಚಿತ್ರದುರ್ಗ ನಗರಲ್ಲಿ ವಾಸ್ತವ್ಯ ಮಾಡಿತು. ನಂತರ ಭಾನುವಾರ ದಾವಣಗೆರೆ ಜಿಲ್ಲೆಗೆ ರಥಯಾತ್ರೆಯು ತೆರಳಿತು.
ಜಗತ್ತಿನ ಪ್ರಪ್ರಥಮ ಸಂಸತ್ತು ಅನುಭವ ಮಂಟಪ–ಬಸವಾದಿ ಶರಣರ ವೈಭವ ರಥದಲ್ಲಿ ಬಸವಣ್ಣ ಅವರೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಭಗವಾನ್ ಗೌತಮ ಬುದ್ಧ, ಶಿವಶರಣೆ ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಪ, ಗುರುನಾನಕ್, ಭಗವಾನ್ ಮಹಾವೀರ, ನಾರಾಯಣ ಗುರು, ಯೇಸು ಕ್ರಿಸ್ತರ ಪ್ರತಿಮೆಗಳನ್ನು ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ತಹಶೀಲ್ದಾರ್ ಗೋವಿಂದರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುಖಂಡರಾದ ಮಹಡಿ ಶಿವಮೂರ್ತಿ, ರೀನಾ ವೀರಭದ್ರಪ್ಪ, ಕೆಇಬಿ ಷಣ್ಮುಖಪ್ಪ, ಕೆ.ಸಿ.ನಾಗರಾಜು, ಚಿನ್ಮಾಯಿನಂದ, ಶಶಿಧರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬಸವಾದಿ ಶರಣರ ವೈಭವ ರಥಯಾತ್ರೆಗೆ ಎಡಿಸಿ ಕುಮಾರಸ್ವಾಮಿ ಚಾಲನೆ
