ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಹಾಗೂ ಕನ್ನಡ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಚರಿಸಲಾಯಿತು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಅಧ್ಯಕ್ಷ ಚಾರಂ ಶ್ರೀನಿವಾಸ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆದಿಚುಂಚನಗಿರಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿಗಳು ಇಡೀ ವಿಶ್ವದಲ್ಲಿ ಆರೋಗ್ಯ, ಶಿಕ್ಷಣ, ವೃಕ್ಷಕೋಟಿ ಸೇವೆಯ ಮೂಲಕ ಅಪಾರ ಕೀರ್ತಿಯನ್ನು ತಂದವರು. ಸ್ವಾಮೀಜಿಯವರ ಸೇವೆ ಮತ್ತು ಆಶೀರ್ವಾದವನ್ನು ಸದಾ ಕಾಲ ಸಮಾಜ ಸ್ವೀಕರಿಸಿ ಧನ್ಯವಾದಗಳನ್ನೂ ಅರ್ಪಿಸುತ್ತಿದೆ ಎಂದು ತಿಳಿಸಿದರು.
ಕನ್ನಡ ಸಂಘಟನೆಗಳ ಮುಖಂಡ ಶಾ ಮುರಳಿ ಮಾತನಾಡಿ ಕರ್ನಾಟಕದ ಧಾರ್ಮಿಕ ಮಹಾ ಸಂಸ್ಥಾನಗಳಲ್ಲಿ ಪ್ರಮುಖವಾಗಿ ಆದಿಚುಂಚನಗಿರಿ ಮಹಾ ಸಂಸ್ಥಾನ ದೇಶದ ಉದ್ದಗಲಕ್ಕೂ ಮಠ ಗಳನ್ನು ಸ್ಥಾಪಿಸಿದೆ .ಜನರಿಗೆ ಅನ್ನದಾಸೋಹದ ಮೂಲಕ ಹಸಿದವರಿಗೆ ಹಾಗೂ ನೊಂದವರಿಗೆ ಸದಾ ಕಾಲ ಆಶ್ರಯ ನೀಡುತ್ತಿರುವ ಮಹಾ ಸಂಸ್ಥಾನವಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಅಪಾರವಾದ ಧಾರ್ಮಿಕ ಶ್ರದ್ಧೆ ಇದೆ. ಸಾವಿರಾರು ವರ್ಷಗಳಿಂದ ನಿರಂತರವಾಗಿ ಧರ್ಮ, ಸಂಸ್ಕೃತಿ ,ಪರಂಪರೆಯನ್ನು ಶಾಶ್ವತವಾಗಿ ಉಳಿಸಿಕೊಂಡು ಬೆಳೆಸುತ್ತಿರುವ ದಾರ್ಶನಿಕರು, ಚಿಂತಕರು, ಋಷಿಗಳು, ಸ್ವಾಮೀಜಿಗಳು, ಗುರುಕುಲಗಳು ಮಠಗಳ ಸೇವೆಯನ್ನು ಭಾರತೀಯರು ಸದಾ ಕಾಲ ಸ್ಮರಿಸಿಕೊಳ್ಳುತ್ತಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಠವು ಭಕ್ತರಿಗೆ ಮಾರ್ಗದರ್ಶನವನ್ನು ಆಧ್ಯಾತ್ಮಿಕ ನೆಮ್ಮದಿ ನೀಡುತ್ತಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸದಾ ಕಾಲ ಅಕ್ಷರ, ಪರಿಸರ, ಮರ ನೆಡುವ ಕಾರ್ಯ ,ಆರೋಗ್ಯಕ್ಕೆ ಮಹತ್ತರವಾದ ಸೇವೆಯನ್ನು ಸಲ್ಲಿಸಿದೆ . ಸಮಾಜ ತಂದೆ ತಾಯಿ ಗುರುಗಳಿಗೆ ಸದಾ ಗೌರವ ನೀಡುತ್ತದೆ. ಗುರುಭಕ್ತಿಯಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯವೆಂದರು.
ಹಿರಿಯರಾದ ಗಣೇಶ್ ದೀಕ್ಷಿತ್ ಮಾತನಾಡಿ ಆದಿಚುಂಚನಗಿರಿ ಮಠ ವೇದಗಳು, ಉಪನಿಷತ್ತುಗಳು ಪುರಾಣಗಳ ಬಗ್ಗೆ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ .ಸಂಸ್ಕೃತ ಭಾಷೆ, ವೇದಗಳಿಗಾಗಿ ಶಾಲಾ-ಕಾಲೇಜು ಆರಂಭಿಸಿ ಧರ್ಮ ಉಳಿಯಲು ಅಪಾರವಾಗಿ ಶ್ರಮಿಸುತ್ತಿದೆ ಎಂದರು.
ಸಮಾಜ ಸೇವಕ ಶ್ರೀನಿಧಿ ಕುದರ್ ಮಾತನಾಡಿ ನಾನು ಆದಿಚುಂಚನಗಿರಿ ಸಂಸ್ಥೆಯ ವಿಧ್ಯಾರ್ಥಿ. ಶಿಕ್ಷಣ, ಧರ್ಮ, ಸೇವೆಯ ಗುಣವನ್ನು ಶಾಲೆ ಕಾಲೇಜುಗಳಲ್ಲಿ ತಿಳಿಸಿ.ಉತ್ತಮ ನಾಗರಿಕರಾಗಿ ರೂಪಿಸುವ ಸಂಸ್ಥೆ.ಬಾಲಗಂಗಾಧರ ಸ್ವಾಮೀಜಿಯವರು ಅಪಾರ ಸೇವೆ ಸಲ್ಲಿಸಿ ಉತ್ತಮ ಸಂಸ್ಥಾನ ವಾಗಿ ರೂಪಿಸಿದರು ಎಂದರು.
ಕನ್ನಡ ಹೋರಾಟಗಾರರಾದ ರಾಜಗೋಪಾಲ್ , ಪಣ್ಯದಹುಂಡಿ ರಾಜು, ಮಹೇಶ್ ಗೌಡ ,ಜಗದೀಶನ್, ಸಾ ಮಿಲ್ ಪ್ರವೀಣ್,ನಂಜುಂಡ ಶೆಟ್ಟಿ ,ಗುಂಬಳ್ಳಿ ನಾಗರಾಜು, ಮಹೇಶ್, ಪದ್ಮ ಪುರುಷೋತ್ತಮ್, ಗೀತಾ ,ತಾಂಡವಮೂರ್ತಿ, ಸಿದ್ದು, ಮಹಮದ್ ಗೌಸ್, ರಂಗಸ್ವಾಮಿ ಮತ್ತು ರಾಜು ,ಶಿವಣ್ಣ ,ಪಾರ್ಕ್ ನಾಗರಾಜು ,ಪ್ರಕಾಶ್ ಇದ್ದರು.

