ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ” ಎನ್ನುವಂತೆ ರಾಜ್ಯ ಸರ್ಕಾರ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ಸರ್ಕಾರಿ ಬಸ್ಸುಗಳ ದುರಸ್ತಿಗೆ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ. ಹೊಸ ಬಸ್ಸುಗಳ ಖರೀದಿಗೆ ದುಡ್ಡಿಲ್ಲ. ಸಾರಿಗೆ ನೌಕರರಿಗೆ ಸಿಗಬೇಕಾದ ನೂರಾರು ಕೋಟಿ ಹಿಂಬಾಕಿ ಪಾವತಿಸಲು ದುಡ್ಡಿಲ್ಲ ಯಾವುದಕ್ಕೂ ದುಡ್ಡಿಲ್ಲ, ದುಡ್ಡಿಲ್ಲ ಎಂದು
ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿ ಬಸ್ ನಿಲ್ದಾಣಗಳನ್ನು ಹರಾಜು ಹಾಕುವ ದುಸ್ಥಿತಿ ತಂದಿಟ್ಟಿರುವ ದಿವಾಳಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡು ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಕನಿಷ್ಠ ಸೌಕರ್ಯ ನೀಡುವುದಕ್ಕಿಂತ ಮುಖ್ಯಮಂತ್ರಿಗಳು, ಸಚಿವರ ಐಷಾರಾಮಿ ಶೋಕಿಯೇ ಮುಖ್ಯವಾಗಿರುವ ಈ ಕಾಂಗ್ರೆಸ್ ಸರ್ಕಾರದ ಲಜ್ಜೆಗೆಟ್ಟ ಧೋರಣೆಗೆ ಕನ್ನಡಿಗರು ರೋಸಿ ಹೋಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

