ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು.ಪಿ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪೌರ ಹಾಗೂ ಸ್ವಚ್ಛತಾ ಕಾರ್ಮಿಕ ಸಂಕಷ್ಟಗಳ ಅನಾವರಣಗೊಂಡಿತು.
ನೌಕರಿ ಖಾಯಂಗೊಳಿಸುವಿಕೆ, ಕನಿಷ್ಠ ವೇತನ, ಇ.ಎಸ್.ಐ, ಪಿ.ಎಫ್. ಕಟಾವಣೆ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ, ಸಮವಸ್ತç, ಸುರಕ್ಷಾ ಸಾಧನಗಳು, ಉಪಹಾರ, ವೈದ್ಯಕೀಯ ತಪಾಸಣೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಆಯೋಗದ ಅಧ್ಯಕ್ಷ ಪಿ.ರಘು ಅವರಲ್ಲಿ ಪೌರ ಕಾರ್ಮಿಕರು ತಮ್ಮ ಅಳಲು ತೊಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷ ಪಿ. ರಘು ಅವರು, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಅವರಿಂದಲೇ ಮಾಹಿತಿ ಪಡೆಯುವ ಸಲುವಾಗಿ ಸಂವಾದ ಏರ್ಪಡಿಸಲಾಗಿದ್ದು, ಇಲ್ಲಿ ಮಂಡಿಸಲಾಗುವ ಸಮಸ್ಯೆಗಳು, ಅಹವಾಲುಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಹೇಳಿದರು.
ನಿವೇಶನ ಮಂಜೂರಾತಿಗೆ ಕೋರಿಕೆ:
ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಿಲ್ಲ, 700 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ, ಹೀಗಾಗಿ ಚಿತ್ರದುರ್ಗ ನಗರಸಭೆಗೆ 350 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ಕೇವಲ 162 ಪೌರ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿ ಮಾಡಬೇಕು. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ 4 ಪ್ರಕರಣಗಳು ದಾಖಲು ಆಗಿವೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದುರಗೇಶಪ್ಪ ಅಧ್ಯಕ್ಷರಲ್ಲಿ ಕೋರಿದರು.

