ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಗಳು ಸ್ವಚ್ಛತೆಯಲ್ಲಿರಲು ಪೌರಕಾರ್ಮಿಕರ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆ ವತಿಯಿಂದ ಶನಿವಾರ ಪೌರ ಕಾರ್ಮಿಕರಿಗೆ ಸುರಕ್ಷಾ ಜಾಕೆಟ್, ಶೂಗಳನ್ನು ವಿತರಿಸಿ ಅವರು ಮಾತನಾಡಿದರು.
ನಗರ ಸ್ವಚ್ಛತೆಯ ಜೊತೆಗೆ ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ಕೊಡಬೇಕು. ಪೌರಕಾರ್ಮಿಕರ ಸೇವೆ ಇಲ್ಲದ ನಗರಗಳನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಹಾಗಾಗಿ ಅವರು ಶ್ರೇಷ್ಠ ಸೇವೆ ಮಾಡುತ್ತಿದ್ದು ಸೇವೆಯ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಪೌರಕಾರ್ಮಿಕರಿಗೆ ಸಚಿವರು ಸಿಹಿತಿನಿಸಿ ಹೊಸ ವರ್ಷದ ಶುಭಕೋರಿದರು. ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಸೇವೆ ಅತ್ಯಮೂಲವಾದಿದ್ದು ಜನರ ಸೇವೆ ಮಾಡುವ ನಿಮಗೆ ಆರೋಗ್ಯ ಆ ಭಗವಂತ ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎ. ವಾಸಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಸಣ್ಣಪ್ಪ, ಶಿವಕುಮಾರ್, ಅಂಬಿಕಾ, ಆರೋಗ್ಯ ನಿರೀಕ್ಷಕರಾದ ಸುನೀಲ್ಕುಮಾರ್, ಸಂಧ್ಯಾ, ಅಶೋಕ್, ನಯಾಜ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತರಾಜ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

