ವಿಕಸಿತ ಭಾರತದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಕೇಂದ್ರ ಬಜೆಟ್

The Union Minister for Finance and Corporate Affairs, Smt. Nirmala Sitharaman meeting with the Managing Director of IMF News, Ms. Kristalina Georgieva, in New Delhi on September 07, 2022.
News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಕಸಿತ ಭಾರತದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಕೇಂದ್ರ ಬಜೆಟ್ 2026–27 ಎಂದು ವಿಪಕ್ಷ ನಾಯಕ, ಬಿಜೆಪಿ ನಾಯಕ ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ನಾಯಕತ್ವದಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2026–27, ವಿಕಸಿತ ಭಾರತ-2047 ಗುರಿಯತ್ತ ದೇಶ ಮುನ್ನಡೆಸುವ ದೂರದೃಷ್ಟಿಯ ಮತ್ತು ಸಮತೋಲನದ ಬಜೆಟ್ ಆಗಿದೆ. ಆರ್ಥಿಕ ಶಿಸ್ತು, ಜನಪರ ನೀತಿ ಮತ್ತು ಅಭಿವೃದ್ಧಿ ಆಧಾರಿತ ದೃಷ್ಟಿಕೋನ ಈ ಮೂರು ಅಂಶಗಳ ಸಮನ್ವಯವೇ ಈ ಬಜೆಟ್‌ನ ಮೂಲ ತತ್ವವಾಗಿದೆ.

- Advertisement - 

ಈ ಬಜೆಟ್ ಮೂರು ಪ್ರಮುಖ ರಾಷ್ಟ್ರೀಯ ಆದ್ಯತೆಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಮೊದಲನೆಯದು, ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು. ಎರಡನೆಯದು, ಜನರ ಆಶೋತ್ತರಗಳಿಗೆ ನೇರ ಸ್ಪಂದನೆ ನೀಡುತ್ತಾ, ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು. ಮೂರನೆಯದು – “ಸಬ್ಕಾ ಸಾಥ್, ಸಬ್ಕಾ ವಿಕಾಸ್ಎಂಬ ತತ್ವದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಅವಕಾಶ ಒದಗಿಸುವುದು. ಈ ದೃಷ್ಟಿಕೋನವೇ ಪ್ರಧಾನಿ ಮೋದಿಜಿ ನೇತೃತ್ವದ ಸರ್ಕಾರವನ್ನು ವಿಭಿನ್ನವಾಗಿ ಗುರುತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು, ದೇಶದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿವೆ. ಬೆಂಗಳೂರುಚೆನ್ನೈ ಮತ್ತು ಬೆಂಗಳೂರುಹೈದರಾಬಾದ್ ಹೈ-ಸ್ಪೀಡ್ ರೈಲು ಮಾರ್ಗಗಳು, ಬೆಂಗಳೂರನ್ನು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿ ಮತ್ತಷ್ಟು ಬಲಪಡಿಸಲಿವೆ. ಇದರೊಂದಿಗೆ ಉದ್ಯೋಗ ಸೃಷ್ಟಿ, ಕೈಗಾರಿಕಾ ವಿಸ್ತರಣೆ, ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ವೇಗ ಸಿಗಲಿದೆ.

- Advertisement - 

ಕೃಷಿ ವಲಯಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಖಾದಿ ಮತ್ತು ಕೈಮಗ್ಗ ಉತ್ಪನ್ನಗಳ ಉತ್ತೇಜನಕ್ಕಾಗಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ತೆಂಗು, ಗಂಧ ಮತ್ತು ಗೇರು ಬೆಳೆಗಳಿಗೆ ವಿಶೇಷ ಪ್ಯಾಕೇಜುಗಳು, ಹಾಗೂ 2030ರೊಳಗೆ ಗೇರು ಮತ್ತು ಕೋಕೋ ಬೆಳೆಗಳನ್ನು ಜಾಗತಿಕ ರಫ್ತು ಉತ್ಪನ್ನಗಳನ್ನಾಗಿ ರೂಪಿಸುವ ಗುರಿ ಇವೆಲ್ಲವೂ ರೈತರ ಆದಾಯ ವೃದ್ಧಿಗೆ ಮಹತ್ವದ ಹೆಜ್ಜೆಗಳಾಗಿವೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರಿಗೆ ಹೊಸ ಮಾರುಕಟ್ಟೆ ಮತ್ತು ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅಶೋಕ್ ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME)  ಬೆಂಬಲ ಘೋಷಣೆ, ಹಾಗೂ ಸೆಮಿಕಂಡಕ್ಟರ್ ವಲಯಕ್ಕೆ 40,000 ಕೋಟಿ ಮೀಸಲು, ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡಲಿದೆ. ಇದರಿಂದ ಬೆಂಗಳೂರು ಮತ್ತು ಕರ್ನಾಟಕದ ಕೈಗಾರಿಕಾ ಪರಿಸರ ವ್ಯವಸ್ಥೆಗೆ ಬಲ ದೊರೆಯಲಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಮಧ್ಯಮ ವರ್ಗದ ಹಿತದೃಷ್ಟಿಯಿಂದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸರಳೀಕರಣಗಳನ್ನು ಮಾಡಲಾಗಿದೆ. ಆದಾಯ ತೆರಿಗೆ ಸಲ್ಲಿಕೆಯಲ್ಲಿ ವಿಳಂಬಕ್ಕೆ ಕೇವಲ 10% ದಂಡ ಮತ್ತು ಯಾವುದೇ ಕ್ರಿಮಿನಲ್ ಶಿಕ್ಷೆ ಇಲ್ಲದಿರುವುದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ TCS ದರವನ್ನು 5% ರಿಂದ 2% ಕ್ಕೆ ಇಳಿಸಿರುವುದು, ಹಾಗೂ ಹೊಸ ಐಟಿ ಕಾಯ್ದೆಯ ಮೂಲಕ ಸರಳ, ಪಾರದರ್ಶಕ ತೆರಿಗೆ ವ್ಯವಸ್ಥೆ ರೂಪಿಸಿರುವುದು ಇವೆಲ್ಲವೂ ಜನಸ್ನೇಹಿ ನಿರ್ಧಾರಗಳಾಗಿವೆ.

17 ಅಗತ್ಯ ಔಷಧಗಳು ಮತ್ತು 6 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ, ಅಪಘಾತ ಪರಿಹಾರಕ್ಕೆ ತೆರಿಗೆ ಮುಕ್ತತೆ ಸಾಮಾನ್ಯ ನಾಗರಿಕರ ಮೇಲೆ ಇರುವ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಜನಪರ ಕ್ರಮಗಳಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಾನವೀಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಒಟ್ಟಾರೆ, ಈ ಬಜೆಟ್ ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯ ಸಮತೋಲನದ ಬ್ಲೂಪ್ರಿಂಟ್ ಆಗಿದ್ದು, ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯುವ ಶಕ್ತಿಯನ್ನೊಳಗೊಂಡಿದೆ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ, ದೇಶದ ಭವಿಷ್ಯಕ್ಕೆ ದಿಕ್ಕು ತೋರಿಸುವ ಈ ಜನಪರ ಹಾಗೂ ಅಭಿವೃದ್ಧಿ ಪರ ಬಜೆಟ್‌ಗೆ ಅಶೋಕ್ ಅವರು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸಿದ್ದಾರೆ.

 

 

 

Share This Article
error: Content is protected !!
";